

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಶನಿವಾರ ಐತಿಹಾಸಿಕ ದಿನವಾಗಿತ್ತು. ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಅತಿಹೆಚ್ಚು ರನ್ ಚೇಸಿಂಗ್ ಮಾಡಿ ದಾಖಲೆಗಳನ್ನು ಬರೆದಿವೆ. ಪಿಬಿಕೆಎಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 265 ರನ್ಗಳ ಗುರಿಯನ್ನು ಬೆನ್ನತ್ತಿದರೆ, ಎಸ್ಆರ್ಹೆಚ್, ಆರ್ಆರ್ನ 228/6 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತು. ಇದೀಗ ಭಾರತದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಂಜ್ರೇಕರ್ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಆಧುನಿಕ ಕ್ರಿಕೆಟ್ನಲ್ಲಿ ಬ್ಯಾಟ್ ಮತ್ತು ಚೆಂಡಿನ ನಡುವಿನ ಅನ್ಯಾಯದ ಸ್ಪರ್ಧೆಯನ್ನು ಟೀಕಿಸಿದ್ದಾರೆ.
ಸದ್ಯದ ನಿಯಮಗಳು ಬ್ಯಾಟ್ಸ್ಮನ್ಗಳಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತವೆ. ಬ್ಯಾಟ್ ಮತ್ತು ಚೆಂಡಿನ ನಡುವೆ ಆಟವನ್ನು ಹೆಚ್ಚು ಸಮತೋಲನಗೊಳಿಸಲು ಗಮನಾರ್ಹ ಬದಲಾವಣೆಗಳನ್ನು ತರುವುದು ತುಂಬಾ ಮುಖ್ಯ ಎಂದು ಸಂಜಯ್ ಮಂಜ್ರೇಕರ್ ಹೇಳುತ್ತಿದ್ದಾರೆ.
'ಕ್ರಿಕೆಟ್ ಬ್ಯಾಟ್ಸ್ಮನ್ಗಳಿಗೆ ಹೆಲ್ಮೆಟ್ಗಳು ಮತ್ತು ದಪ್ಪವಾದ ಬ್ಯಾಟ್ಗಳನ್ನು ನೀಡಿದಾಗ, ಬೌಲರ್ಗಳಿಗೂ ಕೂಡ 10 ಮೀಟರ್ ಉದ್ದದ ಬೌಂಡರಿಗಳನ್ನು ನೀಡಬೇಕಾಗಿತ್ತು' ಎಂದು ಮಂಜ್ರೇಕರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಸಹ ಈ ಚರ್ಚೆಯಲ್ಲಿ ಸೇರಿಕೊಂಡರು. ನ್ಯಾಯಯುತ ಸ್ಪರ್ಧೆಯನ್ನು ಪುನಃಸ್ಥಾಪಿಸುವ ಅಗತ್ಯವನ್ನು ಎತ್ತಿ ತೋರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 265 ರನ್ ಚೇಸ್ ಮಾಡಿ ಇತಿಹಾಸ ನಿರ್ಮಸಿದೆ. 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 262 ರನ್ ಚೇಸ್ ಮಾಡಿದ್ದ ತಮ್ಮದೇ ದಾಖಲೆಯನ್ನು ಮುರಿದಿದೆ.
ಪಂಜಾಬ್ ಕಿಂಗ್ಸ್ ಆರಂಭಿಕರು ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪ್ರಭ್ಸಿಮ್ರನ್ ಸಿಂಗ್ 26 ಎಸೆತಗಳಲ್ಲಿ 292.3 ಸ್ಟ್ರೈಕ್ ರೇಟ್ನಲ್ಲಿ ಅದ್ಭುತ 76 ರನ್ ಗಳಿಸಿದರೆ, ಪ್ರಿಯಾಂಶ್ ಆರ್ಯ 17 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಪವರ್ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 116 ರನ್ ಗಳಿಸಿದರು.
ಆರಂಭಿಕ ಆಟಗಾರರು ಔಟಾದ ನಂತರ, ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 71 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಇನಿಂಗ್ಸ್ನಲ್ಲಿ 20 ಬೌಂಡರಿಗಳು ಮತ್ತು 20 ಸಿಕ್ಸರ್ಗಳು ಸೇರಿದ್ದವು. ಬೌಂಡರಿಗಳ ಮೂಲಕವೇ 200 ರನ್ಗಳು ಬಂದವು.
ಈಮಧ್ಯೆ, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಅವರ ಅರ್ಧಶತಕಗಳ ನೆರವಿನಿಂದ ಎಸ್ಆರ್ಎಚ್ ತಂಡವು ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಾಗಲೇ ಆರ್ಆರ್ ನೀಡಿದ್ದ 229 ರನ್ ಗುರಿಯನ್ನು ತಲುಪಿತು.
Advertisement