

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ದುರಂತ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿತ್ತು. ಆ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ಭದ್ರತಾ ಭೀತಿ ಎದುರಾಗಿದೆ.
ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಸಮಯದಲ್ಲಿ, ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ನಡುವಿನ ಪಂದ್ಯಕ್ಕೂ ಮುನ್ನ ಭಯಾನಕ ಘಟನೆಯೊಂದು ಸಂಭವಿಸಿದೆ.
ಬಿಲ್ ಪಾವತಿಸದ ಕಾರಣ ಕೋಪಗೊಂಡ ಡಿಜಿಟಲ್ ಸೇವಾ ಪೂರೈಕೆದಾರ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಕ್ರೀಡಾಂಗಣದ ಆವರಣಕ್ಕೆ ಪ್ರವೇಶಿಸಿ, ಸುಮಾರು 240 ಸಿಸಿಟಿವಿ ಕ್ಯಾಮೆರಾಗಳಿಗೆ ಸಂಪರ್ಕ ಹೊಂದಿದ್ದ ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಬ್ಬನ್ ಪಾರ್ಕ್ ಪೊಲೀಸರು ಚಿತ್ರದುರ್ಗದ ಮಂಜುನಾಥ್ ಇ (37) ಮತ್ತು ಉತ್ತರ ಪ್ರದೇಶದ ಅಬ್ದುಲ್ ಕಲಾಂ (19) ಎಂಬ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕಳೆದ ವರ್ಷ ಜೂನ್ 4 ರಂದು ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ನಂತರ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಎಐ ತಂತ್ರಜ್ಞಾನವನ್ನು ಅವಲಂಬಿಸಿದ್ದಾರೆ.
ಆ ಇಬ್ಬರು NVR ಘಟಕಗಳು ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದಾಗಿ ಹಲವಾರು ಪ್ರವೇಶ ದ್ವಾರಗಳು ಮತ್ತು ಕೆಲವು ಪ್ರಮುಖ ಪ್ರದೇಶಗಳ ಕಣ್ಗಾವಲು ವ್ಯವಸ್ಥೆಗೆ ಅಡ್ಡಿಯಾಗಿದೆ. ಬಳಿಕ ಸೇವೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸಲಾಗಿದ್ದರೂ, ಈ ಘಟನೆಯು ಮತ್ತೊಮ್ಮೆ ಕ್ರೀಡಾಂಗಣದ ಭದ್ರತೆ ಮತ್ತು ಕಾರ್ಯಾಚರಣೆಯ ಪ್ರೋಟೋಕಾಲ್ಗಳ ಕುರಿತು ಚರ್ಚೆಗೆ ದಾರಿಮಾಡಿಕೊಟ್ಟಿದೆ.
ಗುರುಗ್ರಾಮ ಮೂಲದ AI ಸರ್ವೈಲೆನ್ಸ್ ಸಂಸ್ಥೆಯಾದ ಸ್ಟಾಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಉದ್ಯೋಗಿ ಆದಿತ್ಯ ಭಟ್ ಔಪಚಾರಿಕ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 24 ರಂದು, ಆರ್ಸಿಬಿ vs ಗುಜರಾತ್ ಟೈಟಾನ್ಸ್ ಪಂದ್ಯದ ಮೊದಲು, ಕಂಪನಿಯ ತಂಡವು ಬೆಳಿಗ್ಗೆ ಕ್ಯಾಮೆರಾಗಳ ಪರಿಶೀಲನೆ ನಡೆಸಿದಾಗ 240ಕ್ಕೂ ಹೆಚ್ಚು ಕ್ಯಾಮೆರಾಗಳು ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ.
ಹೆಚ್ಚಿನ ವಿಚಾರಣೆಯಲ್ಲಿ, ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ ಎಂಬ ಸಬ್-ವೆಂಡರ್ ಕಂಪನಿಯಲ್ಲಿ ಕೆಲಸ ಮಾಡುವ ಇಬ್ಬರು ಆರೋಪಿಗಳು ಬೆಳಿಗ್ಗೆ 11.30ರ ಸುಮಾರಿಗೆ ಮಾನ್ಯ ಪಾಸ್ಗಳಿಲ್ಲದೆ, ನಿಷ್ಕ್ರಿಯಗೊಳಿಸಿದ ಪ್ರವೇಶ ಕಾರ್ಡ್ಗಳನ್ನು ಬಳಸಿಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಅವರು NVR (ನೆಟ್ವರ್ಕ್ ವಿಡಿಯೋ ರೆಕಾರ್ಡರ್) ವ್ಯವಸ್ಥೆಗಳು ಮತ್ತು ಫೈಬರ್ ಸಂಪರ್ಕಗಳನ್ನು ಹಾಳುಗೆಡವಿದ್ದಾರೆ ಮತ್ತು ಹಾನಿಗೊಳಿಸಿದ್ದಾರೆ. ಈ ಹಿಂದೆ ಸ್ಥಾಪಿಸಲಾದ ಮೂಲಸೌಕರ್ಯವನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ಕೃತ್ಯ ಕ್ರೀಡಾಂಗಣದಲ್ಲಿ ಅಳವಡಿಸಲಾದ ಇತರ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಅವರು ಅನುಮತಿಯಿಲ್ಲದೆ ಸಿಸಿಟಿವಿ ನಿಯಂತ್ರಣ ಕೊಠಡಿಗೆ ಪ್ರವೇಶಿಸಿ ಪಾರ್ಕಿಂಗ್ ಪ್ರದೇಶದ ಬಳಿಯ ಜಂಕ್ಷನ್ ಬಾಕ್ಸ್ ಕಡೆಗೆ ಚಲಿಸುತ್ತಿರುವುದು ಕಂಡುಬಂದಿದೆ. ಅಲ್ಲಿ ಅವರು ಆಪ್ಟಿಕಲ್ ಫೈಬರ್ಗಳನ್ನು ಹಾನಿಗೊಳಿಸಿದ್ದಾರೆ. ಗೇಟ್ಗಳು, ಪರಿಧಿ ವಲಯಗಳು, ಡಿ ಕಾರ್ಪೊರೇಟ್ ಸ್ಟ್ಯಾಂಡ್ ಮತ್ತು ಕಾನ್ಕೋರ್ಸ್ನಂತಹ ನಿರ್ಣಾಯಕ ಭದ್ರತಾ ಪ್ರದೇಶಗಳನ್ನು ಕ್ಯಾಮೆರಾಗಳು ಒಳಗೊಂಡಿರುವುದರಿಂದ, ಕಂಪನಿಯು ಪೊಲೀಸರಿಗೆ ಅಗತ್ಯವಾದ ಕಣ್ಗಾವಲು ಡೇಟಾ ಅಥವಾ ಲೈವ್ ಫೀಡ್ಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ.
ಬಿಎನ್ಎಸ್ನ ಸೆಕ್ಷನ್ 324(4) (ದುಷ್ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಕ್ರೀಡಾಂಗಣದಲ್ಲಿ ಸಿಸಿಟಿವಿ ಅಳವಡಿಕೆ, ವೈರಿಂಗ್ ಮತ್ತು ಇತರ ಸಿಸಿಟಿವಿ ಸಂಬಂಧಿತ ಕೆಲಸಗಳನ್ನು ತಾವು ಕೈಗೆತ್ತಿಕೊಂಡಿದ್ದಾಗಿ ಆರೋಪಿಗಳು ಬಹಿರಂಗಪಡಿಸಿದ್ದಾರೆ. ಪದೇ ಪದೆ ವಿನಂತಿಸಿದರೂ ಅವರಿಗೆ ಬಾಕಿ ಹಣವನ್ನು ಪಾವತಿಸಿಲ್ಲ. ಕಂಪನಿಯಿಂದ ಬಂದ ನಕಾರಾತ್ಮಕ ಪ್ರತಿಕ್ರಿಯೆಯು ಮಂಜುನಾಥ್ ಅವರನ್ನು ಕೆರಳಿಸಿದೆು. ಹೀಗಾಗಿ, ಕಲಾಂ ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿ ಹೇಳಿದರು.
ಹಾಲಿ ಚಾಂಪಿಯನ್ಗಳಾದ ಆರ್ಸಿಬಿ ಇಲ್ಲಿಯವರೆಗೆ ಉತ್ತಮ ಆವೃತ್ತಿಯನ್ನು ಹೊಂದಿದೆ. ಐಪಿಎಲ್ 2026 ರಲ್ಲಿ ಅವರು ಆಡಿದ 7 ಪಂದ್ಯಗಳಲ್ಲಿ, 5 ಪಂದ್ಯಗಳಲ್ಲಿ ಗೆದ್ದಿದ್ದಾರೆ. ಐಪಿಎಲ್ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಂತರ ಎರಡನೇ ಸ್ಥಾನದಲ್ಲಿದ್ದಾರೆ.
Advertisement