Ranji Trophy Final: ಕರ್ನಾಟಕ vs ಜಮ್ಮು-ಕಾಶ್ಮೀರ ಫೈನಲ್ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಸಲು KSCA ತೀರ್ಮಾನ!

ಕಳೆದ ವರ್ಷ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ ಯಾವುದೇ ದೇಶೀಯ, ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿಲ್ಲ.
KSCA
ಕೆಎಸ್‌ಸಿಎ
Updated on

ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಮುಂಬರುವ ರಣಜಿ ಟ್ರೋಫಿ ಫೈನಲ್ ಪಂದ್ಯವು ಫೆಬ್ರುವರಿ 24 ರಿಂದ ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಕರ್ನಾಟಕವು ತನ್ನ ಸೆಮಿಫೈನಲ್‌ನ ನಾಲ್ಕನೇ ಮತ್ತು ಕೊನೆಯ ದಿನದ ಅಂತ್ಯದಲ್ಲಿ ಲಕ್ನೋದಲ್ಲಿ ಉತ್ತರಾಖಂಡ್ ವಿರುದ್ಧ 802 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಬುಧವಾರ ಕಲ್ಯಾಣಿಯಲ್ಲಿ ಬಂಗಾಳವನ್ನು ಆರು ವಿಕೆಟ್‌ ಅಂತರದಿಂದ ಸೋಲಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರವು ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.

'ಕರ್ನಾಟಕ vs ಜಮ್ಮು ಮತ್ತು ಕಾಶ್ಮೀರ, ಫೆಬ್ರುವರಿ 24 ರಿಂದ ಐದು ದಿನಗಳ ಫೈನಲ್ ಪಂದ್ಯವು ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ' ಎಂದು ಹೆಸರು ಬಹಿರಂಗಪಡಿಸಲು ಬಯಸದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವರ್ಷ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ ಯಾವುದೇ ದೇಶೀಯ, ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿಲ್ಲ. ಇದೀಗ ಕರ್ನಾಟಕ ರಾಜ್ಯ ಸಚಿವ ಸಂಪುಟ ಐಪಿಎಲ್ ಪಂದ್ಯ ಆಯೋಜನೆಗೆ ಷರತ್ತುಬದ್ಧ ಅನುಮೋದನೆ ನೀಡಿದೆ.

ಸರ್ಕಾರಿ ಅಧಿಕಾರಿಗಳು ಸೂಚಿಸಿದಂತೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಗತ್ಯವಿರುವ ಭದ್ರತಾ ನವೀಕರಣಗಳನ್ನು ಸದ್ಯ ಮುಂದುವರಿಸಿರುವುದರಿಂದ, ರಣಜಿ ಟ್ರೋಫಿ ಫೈನಲ್ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಕೆಎಸ್‌ಸಿಎ ಗುರಿಯಾಗಿದೆ.

KSCA
Ranji Trophy: ರಣಜಿ ಟ್ರೋಫಿಯಲ್ಲಿ ಚರಿತ್ರೆ ಸೃಷ್ಟಿಸಿದ ಜಮ್ಮು-ಕಾಶ್ಮೀರ; 67 ವರ್ಷಗಳ ನಂತರ ಫೈನಲ್‌ಗೆ ಎಂಟ್ರಿ..!

ಹೀಗಾಗಿ, ಪ್ರಮುಖ ದೂರದ ಕೇಂದ್ರವಾದ ಹುಬ್ಬಳ್ಳಿಯಲ್ಲಿ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಕ್ರೀಡೆಯನ್ನು ರಾಜ್ಯದ ವಿವಿಧ ಮೂಲೆಗಳಿಗೆ ಕೊಂಡೊಯ್ಯುವ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ದೂರದೃಷ್ಟಿಗೆ ಹೊಂದಿಕೆಯಾಗುತ್ತದೆ ಎನ್ನಲಾಗಿದೆ.

ಕೆಎಸ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವಾಗ, ಪ್ರಸಾದ್ ಅವರು ಕರ್ನಾಟಕದಾದ್ಯಂತ ಕ್ರಿಕೆಟ್ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದರು. ನಗರ ಕೇಂದ್ರಗಳನ್ನು ಮೀರಿದ ಸ್ಥಳಗಳಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ತರುವತ್ತ ಗಮನಹರಿಸಿದ್ದರು.

ಅವರ ಮಾತುಗಳಿಗೆ ಪೂರಕವಾಗಿ, ವೆಂಕಟೇಶ್ ಪ್ರಸಾದ್ ಮತ್ತು ಅವರ ತಂಡವು ಇತ್ತೀಚೆಗೆ ರಾಜ್ಯದಾದ್ಯಂತ ಹಲವಾರು ಕೇಂದ್ರಗಳಿಗೆ ಭೇಟಿ ನೀಡಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ನಿರ್ಣಯಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com