

ಮುಂಬೈ: ಬೇರೊಬ್ಬಳೊಂದಿಗೆ ಏಕಾಂತದಲ್ಲಿದ್ದಾಗ ಪಾಲಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಎಂದು ಗಂಬೀರ ಆರೋಪ ಮಾಡಿದ್ದ ನಟ, ನಿರ್ಮಾಪಕ ವಿದ್ಯಾನ್ ಮಾನೆ ವಿರುದ್ಧ ಸಂಗೀತ ಸಂಯೋಜಕ, ಗಾಯಕ ಪಲಾಶ್ ಮುಚ್ಛಲ್ ಅವರು 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿರುವ ಪಲಾಶ್, 'ನನ್ನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು, ಅತಿರೇಕ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿರುವ ಸಾಂಗ್ಲಿ ಮೂಲದ ವಿದ್ಯಾನ್ ಮಾನೆ ಅವರಿಗೆ, ನನ್ನ ವಕೀಲ ಶ್ರೇಯನ್ಶ್ ಮಿಥಾರೆ ಅವರು 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಸಂಬಂಧ ಲೀಗಲ್ ನೋಟಿಸ್ ಕಳುಹಿಸಿದ್ದಾರೆಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಸಾಂಗ್ಲಿ ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿದ್ದ ಮಾನೆ, ಗಾಯಕ ಪಲಾಶ್ ಅವರಿಂದ ರೂ.40 ಲಕ್ಷ ವಂಚನೆಗೊಳಗಾಗಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದರು. ಈ ಕುರಿತು ಪೊಲೀಸರೇ ಮಾಹಿತಿ ನೀಡಿದ್ದರು.
ಪಲಾಶ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಾಂಗ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಮಾನೆ ಮಂಗಳವಾರ (ಜ.20) ಭೇಟಿಯಾಗಿದ್ದರು.
ಪಲಾಶ್ ಅವರು ಸಾಂಗ್ಲಿಯಲ್ಲಿ 2023ರ ಡಿಸೆಂಬರ್ 5ರಂದು ತಮ್ಮನ್ನು ಭೇಟಿಯಾಗಿದ್ದರು. ಅವರ 'ನಝಾರಿಯಾ' ಸಿನಿಮಾಗೆ ಬಂಡವಾಳ ಹಾಕುವಂತೆ ಕೇಳಿದ್ದರು. ಸಿನಿಮಾದಲ್ಲಿ ಪಾತ್ರ ನೀಡುವುದಾಗಿಯೂ ಹೇಳಿದ್ದರು. ಅದರಂತೆ ರೂ.40 ಲಕ್ಷ ಹೂಡಿಕೆ ಮಾಡಿದ್ದೆ. ಆದಾಗ್ಯೂ, ಸಿನಿಮಾ ಪೂರ್ಣಗೊಳ್ಳಲಿಲ್ಲ. ಹೀಗಾಗಿ, ಹಣ ವಾಪಸ್ ಮಾಡುವಂತೆ ಕೋರಿದ್ದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಸ್ಮೃತಿ ಮಂಧಾನ ಅವರ ವಿವಾಹವು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನವೆಂಬರ್ 23, 2025 ರಂದು ನಿಗದಿಯಾಗಿತ್ತು. ಆದಾಗ್ಯೂ, ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರ ಹಠಾತ್ ಅನಾರೋಗ್ಯದಿಂದಾಗಿ ಸಮಾರಂಭವನ್ನು ಮುಂದೂಡಲಾಯಿತು.
ಇದೇ ವೇಳೆ ಪಲಾಶ್ ಕೂಡ ಅನಾರೋಗ್ಯಕ್ಕೆ ಒಳಗಾದರು. ಹೀಗಾಗಿ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಕೆಲವು ದಿನಗಳ ನಂತರ, ಮಂಧಾನ ಅವರು ವಿವಾಹವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದರು
Advertisement