

ನವದೆಹಲಿ: ಭಾರತ- ಇಂಗ್ಲೆಂಡ್ ನಡುವಣ ಟಿ20 ಪಂದ್ಯದ ಪ್ರಸಾರದ ಸಮಯದಲ್ಲಿ ಕಾಂಡೋಮ್ ಜಾಹೀರಾತು ತೋರಿಸಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿಷಯದ ಬಗ್ಗೆ ಯಾವುದೇ ಸ್ಪಷ್ಟತೆ ನೀಡದಿದ್ದರೆ ಸಂಸತ್ತಿನಲ್ಲಿ ಆ ಕುರಿತು ಪ್ರಶ್ನಿಸುವುದಾಗಿ ಅವರು ತಿಳಿಸಿದ್ದಾರೆ. ಇದನ್ನು ಪರಿಶೀಲಿಸುವಂತೆ ಬಿಸಿಸಿಐಗೆ ಸೂಚಿಸಿದ್ದಾರೆ. ಕೀರ್ತಿ ಆಜಾದ್ 1983ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಓಲ್ಡ್ ಟ್ರಾಫರ್ಡ್ನಲ್ಲಿ ಭಾರತ vs ಇಂಗ್ಲೆಂಡ್ ನಡುವಿನ ಅಂತರರಾಷ್ಟ್ರೀಯ ಟಿ20 ಪಂದ್ಯದ ನೇರ ಪ್ರಸಾರವನ್ನು ಮಕ್ಕಳು ವೀಕ್ಷಿಸುತ್ತಿರುತ್ತಾರೆ. ಡ್ಯುರೆಕ್ಸ್ನ ವಯಸ್ಕರ ಜಾಹೀರಾತು ಪರದೆಯ ಮೇಲೆ ಬರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಅವರು ಪ್ರಶ್ನಿಸಿದ್ದು, ಬಿಸಿಸಿಐ ಇದನ್ನು ಗಮನಿಸಬೇಕು ಎಂದಿದ್ದಾರೆ.
ಈ ಜಾಹೀರಾತನ್ನು ಅವರು ನಿಷೇಧಿತ ತಂಬಾಕು ಮತ್ತು ಆಲ್ಕೋಹಾಲ್ ಅಂಶದೊಂದಿಗೆ ಹೋಲಿಸಿದ್ದಾರೆ. ಇನ್ನೂ ಕೆಟ್ಟದ್ದೇನೆಂದರೆ ಕಾಂಡೋಮ್ ಜಾಹೀರಾತು ಓವರ್ಗಳ ನಡುವೆ ಪ್ರಸಾರವಾಯಿತು ಎಂದು ಆಜಾದ್ ಹೇಳಿದ್ದಾರೆ.
ಮಕ್ಕಳು ಮತ್ತು 16 ವರ್ಷದೊಳಗಿನ ಅನೇಕ ಹದಿಹರೆಯದವರು ಸೇರಿದಂತೆ ಕನಿಷ್ಠ 44 ಕೋಟಿ ಜನರು ಇದನ್ನು ನೋಡಿರಬೇಕು. ಇದು ವಯಸ್ಕರ ಜಾಹೀರಾತು. 16 ವರ್ಷಕ್ಕಿಂತ ಮಕ್ಕಳು ತಮ್ಮ ಪೋಷಕರೊಂದಿಗೆ ಪಂದ್ಯವನ್ನು ವೀಕ್ಷಿಸುತ್ತಿರುತ್ತಾರೆ. ಈ ದೇಶದಲ್ಲಿ ಕ್ರಿಕೆಟ್ ಅನ್ನು ಒಂದು ಧರ್ಮದಂತೆ ಪರಿಗಣಿಸಲಾಗುತ್ತದೆ. ನಾನು ಕ್ರಿಕೆಟ್ ನೋಡುತ್ತಿದ್ದಾಗ, 44 ಕೋಟಿ ಜನರು ಅದನ್ನು ವೀಕ್ಷಿಸುತ್ತಿದ್ದರು. ಪಂದ್ಯದ ಸಮಯದಲ್ಲಿ ವಯಸ್ಕರ ಜಾಹೀರಾತು ಕಾಣಿಸಿಕೊಂಡಿತು ಎಂದು ನಾಲ್ಕು ಬಾರಿ ತೃಣಮೂಲ ಸಂಸದರಾಗಿರುವ ಕೀರ್ತಿ ಆಜಾದ್ ಸುದ್ದಿಸಂಸ್ಥೆ IANS ಗೆ ತಿಳಿಸಿದರು.
ನೋಟಿಸ್ ನೀಡುವ ಅಗತ್ಯವಿಲ್ಲ. "ಬಿಸಿಸಿಐ ಇದನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ, ನಾನು ಅದನ್ನು ಸಂಸತ್ತಿನಲ್ಲಿ ಖಂಡಿತವಾಗಿಯೂ ಪ್ರಶ್ನಿಸುತ್ತೇನೆ ಎಂದು ತಿಳಿಸಿದರು. ಈ ವಿಷಯದ ಬಗ್ಗೆ ಬಿಸಿಸಿಐ ಇನ್ನೂ ಏನನ್ನೂ ಹೇಳಿಲ್ಲ. ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಕೂಡ ಯಾವುದೇ ಹೇಳಿಕೆ ನೀಡಿಲ್ಲ.