ಅತ್ಯಂತ ಕಿರಿಯ ವಯಸ್ಸಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ, ಸೋಮವಾರ ಒಂದು ಪ್ರಮುಖ ಪಾಠವನ್ನು ಕಲಿತರು. ಸೂಪರ್ ಓವರ್ನಲ್ಲಿ ಭಾರತ ಎ ತಂಡವನ್ನು ಸೋಲಿಸಿದ ಶ್ರೀಲಂಕಾ ಎ ಆಟಗಾರರ ಜೊತೆ ವೈಭವ್ ಘರ್ಷಣೆ ನಡೆಸಿದರು. ಎದುರಾಳಿ ತಂಡದ ಓರ್ವ ಆಟಗಾರನನ್ನು ತಳ್ಳಿದ ಅವರ ನಡೆಗೆ ಇದೀಗ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಕ್ರಿಕೆಟ್ನಂತಹ ಕ್ರೀಡೆಯಲ್ಲಿ ದೈಹಿಕ ಘರ್ಷಣೆ ಎಂದಿಗೂ ಅಪೇಕ್ಷಣೀಯವಲ್ಲ. ಪಂದ್ಯ ಮುಗಿದ ನಂತರ, ಶ್ರೀಲಂಕಾ ಕ್ರಿಕೆಟ್ನ ದಂತಕಥೆಯೊಬ್ಬರು ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಲು ಕಾಯುತ್ತಿದ್ದರು. ವೈಭವ್ ಸೂರ್ಯವಂಶಿಯವರ ಅಭಿಮಾನಿಯಾಗಿರುವ ಅನುರಾ ತೆನ್ನೆಕೂನ್, ಪಂದ್ಯದ ಸಮಯದಲ್ಲಿ ನಡೆದ ಉದ್ವಿಗ್ನ ಘಟನೆಯ ನಂತರ ಅವರಿಗೆ ಸಲಹೆ ನೀಡಿದರು.
'ನೀವು ನಿಮ್ಮ ಆಟದ ಮೇಲೆ ಮಾತ್ರ ಗಮನಹರಿಸಿ ಮತ್ತು ಹೊರಗಿನ ಗದ್ದಲವನ್ನು ನಿರ್ಲಕ್ಷ್ಯಿಸಿ. ಇಂದು, ದುರದೃಷ್ಟವಶಾತ್, ನೀವು ಮುಂದುವರಿಯಲು ಸಾಧ್ಯವಾಗಲಿಲ್ಲ. ಆದರೆ ಅದು ಆಟದ ಭಾಗವಾಗಿದೆ, ನೀವು ಪ್ರತಿದಿನ ಮುಂದುವರಿಯಲು ಸಾಧ್ಯವಿಲ್ಲ' ಎಂದು ಸ್ಪೋರ್ಟ್ಸ್ಟಾರ್ ಉಲ್ಲೇಖಿಸಿದಂತೆ ತೆನ್ನೆಕೂನ್ ವೈಭವ್ ಸೂರ್ಯವಂಶಿ ಅವರಿಗೆ ಸಲಹೆ ನೀಡಿದ್ದಾರೆ.
ವೈಭವ್ ಸೂರ್ಯವಂಶಿ ಮೈದಾನದಲ್ಲಿ ಶ್ರೀಲಂಕಾ ಎ ತಂಡದ ಆಟಗಾರರ ಜೊತೆ ವಾಗ್ವಾದ ನಡೆಸಿದರು. ತ್ರಿಕೋನ ಸರಣಿಯ ಆ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಗೆಲ್ಲಲು 17 ರನ್ಗಳ ಅಗತ್ಯವಿದ್ದಾಗ ಭಾರತ, ಕೇವಲ ಸ್ಲಿಂಗರ್ ಕಗುಥಾಸ್ ಮಥುಲನ್ ವಿರುದ್ಧ ಕೇವಲ ಒಂಬತ್ತು ರನ್ಗಳನ್ನು ಗಳಿಸಿ ಸತತ ಎರಡನೇ ಪಂದ್ಯವನ್ನು ಸೋತಿತು.
ಕಗುಥಾಸ್ ಮಥುಲನ್ ಅವರ ಕೊನೆಯ ಮೂರು ಎಸೆತಗಳನ್ನು ಎದುರಿಸಿದ ಸೂರ್ಯವಂಶಿ, ಒಂದು ಬೌಂಡರಿ ಸೇರಿದಂತೆ ಕೇವಲ ಆರು ರನ್ ಗಳಿಸಿದರು.
ಪಂದ್ಯ ಮುಗಿದ ನಂತರ, ಸೂರ್ಯವಂಶಿ ಮತ್ತು ಅವರ ಪಾಲುದಾರ ಸೂರ್ಯಾಂಶ್ ಶೆಡ್ಜ್ ಪೆವಿಲಿಯನ್ ಕಡೆಗೆ ಹಿಂತಿರುಗಿ ನಡೆಯುತ್ತಿದ್ದಂತೆ ಲಂಕಾ ತಂಡವು ಸ್ವಲ್ಪ ಅತಿರೇಕದ ಸಂಭ್ರಮಾಚರಣೆಯಲ್ಲಿ ತೊಡಗಿತ್ತು.
ಬಳಿಕ ವೈಭವ್ ಸೂರ್ಯವಂಶಿ ಕೋಪದಿಂದ ವೇಗದ ಬೌಲರ್ ಮಥುಲನ್ ಜೊತೆಗೆ ಘರ್ಷಣೆಯಲ್ಲಿ ತೊಡಗಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸೂರ್ಯವಂಶಿ ಫೀಲ್ಡರ್ನನ್ನು ತಳ್ಳುತ್ತಿರುವುದು ಕಂಡುಬಂತು ಮತ್ತು ಅದಕ್ಕೆ ಪ್ರತಿಯಾಗಿ ಅವರು ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಆಗ ಶ್ರೀಲಂಕಾದ ಹಿರಿಯ ಅಂತರರಾಷ್ಟ್ರೀಯ ಆಟಗಾರ ನಿರೋಷನ್ ಡಿಕ್ವೆಲ್ಲಾ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
Advertisement