

ಕೋಲ್ಕತ್ತಾ: ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಟೀಂ ಇಂಡಿಯಾವನ್ನು ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಗೆ ತಲುಪಿಸಿದ್ದಾರೆ.
ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತದ ಇನ್ನಿಂಗ್ಸ್ನ ಅಂತಿಮ ಓವರ್ನ ಮೊದಲ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ಸ್ಯಾಮ್ಸನ್, ವೆಸ್ಟ್ ಇಂಡೀಸ್ ಆಟಗಾರರು ಹಾಗೂ ಅಭಿಮಾನಿಗಳ ಹೃದಯವನ್ನು ಚೂರು ಚೂರು ಮಾಡಿದರು. ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಮಂಡಿಯೂರಿ, ಹೆಲ್ಮೆಟ್ ತೆಗೆದು ಪ್ರಾರ್ಥನೆ ಮಾಡಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಬಳಿಕ ಜಿಯೋಹಾಟ್ಸ್ಟಾರ್ನಲ್ಲಿ ಪಾರ್ಥಿವ್ ಪಟೇಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸ್ಯಾಮ್ಸನ್, ಇದು ಅತ್ಯಂತ ವಿಶೇಷ ಕ್ಷಣ. ನಾನು ದೊಡ್ಡ ನಂಬಿಕೆಯುಳ್ಳವನಾಗಿದ್ದು, ಇದನ್ನು ತುಂಬಾ ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.
ಭಾರತ ಗೆಲುವು ಸಾಧಿಸುತ್ತಿದ್ದಂತೆಯೇ ಸಂಭ್ರಮಾಚರಣೆ ಗರಿಗೆದರಿತು. ಆದರೆ, ಸ್ಯಾಮ್ಸನ್ ಜನರ ಗಮನಸೆಳೆಯುವಂತೆ ವರ್ತಿಸಲಿಲ್ಲ. ಬದಲಾಗಿ ಅವರು ಮೌನವಾಗಿಯೇ ತಮ್ಮ ಪದಗಳಲ್ಲಿ ಭಾವನೆಗಳನ್ನು ಹಂಚಿಕೊಂಡರು. ಈ ಇನ್ನಿಂಗ್ಸ್ ಯಾಕೆ ಹೆಚ್ಚು ಮಹತ್ವದ್ದಾಗಿದೆ ಎಂಬುದನ್ನು ಅದರ ಮೂಲಕವೇ ವಿವರಿಸಿದರು.
ವಿಕೆಟ್ಗಳು ಬೀಳುತ್ತಲೇ ಇದ್ದ ಒತ್ತಡದ ಸಂದರ್ಭದಲ್ಲಿ ಆಕ್ರಮಣಶೀಲತೆಗಿಂತ ಹೆಚ್ಚಿನ ಸಂಯಮ, ಸ್ಪಷ್ಟತೆ ಮತ್ತು ಜವಾಬ್ದಾರಿಯನ್ನು ಚೇಸ್ ಬಯಸುತ್ತದೆ ಎಂದು ಸ್ಯಾಮ್ಸನ್ ಹೇಳಿದರು.
"ಹೌದು. ವೆಸ್ಟ್ ಇಂಡೀಸ್ ನೀಡಿದ ಮೊತ್ತ ಸ್ವಲ್ಪ ಕಷ್ಟಕರವಾಗಿದೆ ಅಂತಾ ಮೊದಲಿಗೆ ಭಾವಿಸಿದ್ದೆ. ನಮ್ಮ ಬ್ಯಾಟಿಂಗ್ ಸಾಮರ್ಥ್ಯ ನೋಡಿದರೆ ಈಡನ್ ಗಾರ್ಡನ್ನಲ್ಲಿ 190 ರನ್ ಗಳಿಸಬಹುದು ಎಂದು ನನಗೆ ಅನಿಸಿತು. ಇಬ್ಬನಿ ಬಂದಾಗ, ಅದು ಸ್ವಲ್ಪ ಸುಲಭವಾಗುತ್ತದೆ ಅಂದುಕೊಂಡಿದ್ದೆ. ಆದರೆ ಮಧ್ಯಂತರದಲ್ಲಿ ವಿಕೆಟ್ಗಳು ಬೀಳುತ್ತಿದ್ದರಿಂದ ಸ್ವಲ್ಪ ಸವಾಲು ಆಗಿತ್ತು. ನಿಜ ಹೇಳಬೇಕೆಂದರೆ, ಅಲ್ಲಿ 10 ವರ್ಷಗಳ ಅನುಭವ ಮಹತ್ವದ ಪಾತ್ರವನ್ನು ವಹಿಸಿದೆ. ನನಗೆ ಉತ್ತಮ ಆರಂಭ ಸಿಕ್ಕಿತು. ಸಾಮಾನ್ಯವಾಗಿ ಉತ್ತಮ ಆರಂಭ ಪಡೆದ ನಂತರ, ಪ್ರಾಬಲ್ಯ ಸಾಧಿಸಲು ಬಯಸುತ್ತೇನೆ ಮತ್ತು ನಂತರ ಒಂದೆರಡು ಓವರ್ಗಳಲ್ಲಿ ಆಟವನ್ನು ಮುಗಿಸುತ್ತೇನೆ. ಆದರೆ ವಿಕೆಟ್ ಬೀಳುತ್ತಿದ್ದಾಗ ನಾನು ಕೊನೆಯವರೆಗೂ ಇರಬೇಕಾದ ಅಗತ್ಯವಿತ್ತು ಎಂದು ತಿಳಿಸಿದರು.
ಇದೇ ವೇಳೆ ತಮ್ಮ ಬ್ಯಾಟಿಂಗ್ ವಿಧಾನ ಕುರಿತು ಮಾತನಾಡಿದ ಸ್ಯಾಮ್ಸನ್, ನಾನು ಸಾಕಷ್ಟು ಸಿಕ್ಸರ್ಗಳನ್ನು ಹೊಡೆಯಲು ಪ್ರಯತ್ನಿಸಿದೆ. ಆದರೆ ಒತ್ತಡ ಇದ್ದ ಕಾರಣ ಸಿಕ್ಸರ್ ಬದಲು ಬೌಂಡರಿಗಳಿಗೆ ಆದ್ಯತೆ ನೀಡಿದ್ದಾಗಿ ಹೇಳಿದರು.
Advertisement