ಶುಕ್ರವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2026ರ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಕಿಂಗ್ಸ್ಮೆನ್ ತಂಡವು ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು ಉಸ್ಮಾನ್ ಖಾನ್ ಅವರ ಕೇವಲ 30 ಎಸೆತಗಳಲ್ಲಿ 61 ರನ್ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 186 ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಇಸ್ಲಾಮಾಬಾದ್ ತೀವ್ರವಾಗಿ ಹೋರಾಟ ನಡೆಸಿದರೂ, 7 ವಿಕೆಟ್ ಕಳೆದುಕೊಂಡು ಕೇವಲ 184 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅಂತಿಮವಾಗಿ ಎರಡು ರನ್ಗಳಿಂದ ಪಂದ್ಯವನ್ನು ಸೋತಿತು. ಈ ಗೆಲುವಿನೊಂದಿಗೆ, ಮಾರ್ನಸ್ ಲಾಬುಶೇನ್ ನೇತೃತ್ವದ ತಂಡವು ಪಿಎಸ್ಎಲ್ 2026ರ ಫೈನಲ್ನಲ್ಲಿ ಭಾನುವಾರ ಪೇಶಾವರ್ ಝಲ್ಮಿ ತಂಡವನ್ನು ಎದುರಿಸಲಿದೆ.
ಈ ಅದ್ಭುತ ಗೆಲುವಿನ ನಂತರ, ಎರಡು ವಿಕೆಟ್ಗಳನ್ನು ಪಡೆದ ಹೈದರಾಬಾದ್ ವೇಗಿ ಮೊಹಮ್ಮದ್ ಅಲಿ, ನಮ್ಮ ತಂಡದ ಮನಸ್ಥಿತಿ ಮತ್ತು ಪರಿಶ್ರಮಕ್ಕೆ ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ನೆನೆದದ್ದು ವಿಶೇಷವಾಗಿತ್ತು.
'ಈ ಕ್ಷಣವನ್ನು ಪದಗಳಲ್ಲಿ ವರ್ಣಿಸುವುದು ತುಂಬಾ ಕಷ್ಟ. ಇಷ್ಟು ಕಳಪೆ ಓವರ್ ಬೌಲಿಂಗ್ ಮಾಡಿದ ನಂತರ ನಾನು ಸಂಪೂರ್ಣವಾಗಿ ಮೂಕನಾದೆ. ಹುನೈನ್ ಅವರಿಗೆ ಎಲ್ಲ ಶ್ರೇಯಸ್ಸು ಸಲ್ಲುತ್ತದೆ. ಅವರು ಕೊನೆಯ ಓವರ್ ಬೌಲ್ ಮಾಡಿದ ರೀತಿ, ಅವರ ಹಿಡಿತವನ್ನು ಕಾಯ್ದುಕೊಂಡಿದ್ದು ಮತ್ತು ಕೊನೆಯ ಎಸೆತದವರೆಗೂ ಅವರ ಧೈರ್ಯವನ್ನು ಹಿಡಿದಿಟ್ಟುಕೊಂಡಿದ್ದು ಅತ್ಯುತ್ತಮವಾಗಿತ್ತು. ನನ್ನ ಓವರ್ ನಂತರ ನಾನು ಸ್ವಲ್ಪ ನಿರಾಳನಾಗಿದ್ದೆ, ಆದರೆ ಅವರು ಟೂರ್ನಮೆಂಟ್ನಾದ್ಯಂತ ಎಷ್ಟು ಅದ್ಭುತವಾಗಿ ಬೌಲಿಂಗ್ ಮಾಡಿದ್ದನ್ನು ನೋಡಿ ನಾನು ಅವರ ಮೇಲೆ ನಂಬಿಕೆ ಇಟ್ಟಿದ್ದೆ' ಎಂದು ಅಲಿ ಹೇಳಿದರು.
'ಪೇಶಾವರ್ ಝಲ್ಮಿ ವಿರುದ್ಧದ ಅಂತಿಮ ಓವರ್ನಲ್ಲಿ ಹುನೈನ್ ಅವರಿಗೆ 14 ರನ್ಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆ ವೈಫಲ್ಯದ ಹೊರತಾಗಿಯೂ ಅವರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ. ಏಕೆಂದರೆ, ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಇದೀಗ ಸಾಕಷ್ಟು ಸುಧಾರಿಸಿದ್ದಾರೆ ಮತ್ತು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುವವರಿಗೆ ಅದೃಷ್ಟ ಯಾವಾಗಲೂ ಕೈಹಿಡಿಯುತ್ತದೆ ಎಂದು ಶ್ರೇಷ್ಠ ರಾಹುಲ್ ದ್ರಾವಿಡ್ ಹೇಳುತ್ತಾರೆ' ಎಂದು ಅವರು ಹೇಳಿದರು.
ಪಂದ್ಯದ ಆರಂಭದಲ್ಲಿ, ನಾಯಕ ಲಾಬುಶೇನ್ (39) ಮತ್ತು ಸೈಮ್ ಅಯೂಬ್ (38) ಹೈದರಾಬಾದ್ ತಂಡವು 186/5 ಸ್ಕೋರ್ ತಲುಪಲು ಸಹಾಯ ಮಾಡುವಲ್ಲಿ ಪ್ರಮುಖ ಕೊಡುಗೆ ನೀಡಿದರು. ಆದರೆ. ಇಮಾದ್ ವಾಸಿಮ್ ಎರಡು ವಿಕೆಟ್ಗಳನ್ನು ಪಡೆದು ಇಸ್ಲಾಮಾಬಾದ್ ಪರ ಅತ್ಯುತ್ತಮ ಬೌಲರ್ ಆಗಿದ್ದರು.
Advertisement