ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ರಾಜಸ್ಥಾನ್ ರಾಯಲ್ಸ್ ತಂಡ ಸೋಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. 15 ವರ್ಷದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 93 ರನ್ ಗಳಿಸಿ ತಂಡದ ನಿರ್ಣಾಯಕ ಗೆಲುವಿಗೆ ಕೊಡುಗೆ ನೀಡಿದರು. ಇದು ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಕೂಡ ಎದ್ದು ನಿಂತು ಈ ಅದ್ಭುತ ಪ್ರತಿಭೆಯನ್ನು ಶ್ಲಾಘಿಸಲು ಕಾರಣವಾಯಿತು. ಪಂದ್ಯದ ನಂತರ ಇಬ್ಬರೂ ಸಹ ಮಾತನಾಡಿದರು. ಈ ವೇಳೆ ವೈಭವ್, ಎಲ್ಎಸ್ಜಿ ಮಾಲೀಕರ ಪತ್ನಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಎಲ್ಲರ ಗಮನ ಸೆಳೆಯಿತು.
ಶತಕ ಬಾರಿಸದೆ ಸೂರ್ಯವಂಶಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಂತೆ, ಗೋಯೆಂಕಾ ಎದ್ದು ನಿಂತು, ಬಾಲಕನಿಗೆ ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ನಂತರ, ಇಬ್ಬರೂ ಮೈದಾನದಲ್ಲಿ ನಿಂತು ಸ್ವಲ್ಪ ಹೊತ್ತು ಸಂವಾದ ನಡೆಸಿದರು. ಆಗ ಸೂರ್ಯವಂಶಿ ಗೌರವಾರ್ಥವಾಗಿ ಗೋಯೆಂಕಾ ಅವರ ಪತ್ನಿಯ ಪಾದಗಳನ್ನು ಮುಟ್ಟಿ ನಮಸ್ಕರಿದರು.
ಗೋಯೆಂಕಾ ಮತ್ತು ಸೂರ್ಯವಂಶಿ ಮಾತನಾಡುವುದನ್ನು ನೋಡಿದ ಭಾರತದ ದಂತಕಥೆ ಸುನೀಲ್ ಗವಾಸ್ಕರ್, ಎಲ್ಎಸ್ಜಿ ಬಾಸ್ ಶೀಘ್ರದಲ್ಲೇ ಈ ಯುವ ಆಟಗಾರನನ್ನು ಆಯ್ಕೆ ಮಾಡುತ್ತಾರೆ ಎಂದು ತಮಾಷೆ ಮಾಡಿದರು.
'ನಾನು ಶೀಘ್ರದಲ್ಲೇ ನಿಮ್ಮನ್ನು ಆಯ್ಕೆ ಮಾಡುತ್ತೇನೆ' ಎಂದು ಗೋಯೆಂಕಾ ಹೇಳಿರುತ್ತಾರೆ ಎಂದು ಪಂದ್ಯದ ನಂತರ ಗವಾಸ್ಕರ್ ಹೇಳಿದರು. ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಬೀರಿರುವ ಪ್ರಭಾವವನ್ನು ಶ್ಲಾಘಿಸಿದ ಅವರು, ಪ್ರತಿಸ್ಪರ್ಧಿ ತಂಡಗಳನ್ನು ಸಹ ಅವರ ಅಭಿಮಾನಿಗಳನ್ನಾಗಿ ಮಾಡಿದೆ ಎಂದರು.
ಪಂದ್ಯದ ನಂತರ ಮಾತನಾಡಿದ ವೈಭವ್ ಸೂರ್ಯವಂಶಿ, ದೀರ್ಘ ಸಮಯ ಬ್ಯಾಟಿಂಗ್ ಮಾಡುವುದು ಮುಖ್ಯವಾಗಿತ್ತು. ಆದ್ದರಿಂದ ವಿಧಾನದಲ್ಲಿ ಬದಲಾವಣೆ ತರಲಾಗಿದೆ ಎಂದು ವಿವರಿಸಿದರು.
'ಅದು ನನ್ನ ಮನಸ್ಥಿತಿಯಾಗಿತ್ತು. ನಾನು ಯಾವುದೇ ಸಮಯದಲ್ಲಿ ಎರಡು ಅಥವಾ ಮೂರು ಬೌಂಡರಿ ಅಥವಾ ಸಿಕ್ಸರ್ಗಳನ್ನು ಹೊಡೆಯಬಲ್ಲೆ ಎಂದು ನನಗೆ ತಿಳಿದಿದೆ. ಆದ್ದರಿಂದ ನಾನು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ಹೆಚ್ಚು ಆತುರಪಡದೆ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಲು ಪ್ರಯತ್ನಿಸಬಹುದು' ಎಂದು ಹೇಳಿದರು.
ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ 93 ರನ್ ಗಳಿಸಿದರು. ಅವರಿಗೆ ಧ್ರುವ್ ಜುರೆಲ್ ಸೂಕ್ತ ಬೆಂಬಲ ನೀಡಿದರು. ಅವರು 38 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಒಳಗೊಂಡಂತೆ 53 ರನ್ ಗಳಿಸಿದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿತು.
Advertisement