ಗುಜರಾತ್ ಟೈಟಾನ್ಸ್ (GT) ವಿರುದ್ಧದ ಗೆಲುವಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟೀದಾರ್ ತಮ್ಮ ಬ್ಯಾಟ್ಸ್ಮನ್ಗಳ ನಿರ್ಭೀತ ಇಂಟೆಂಟ್ ಅನ್ನು ಶ್ಲಾಘಿಸಿದರು ಮತ್ತು ವಿಕೆಟ್ ಬಗ್ಗೆ ಚಿಂತಿಸದೆ ಎದುರಾಳಿ ಬೌಲರ್ಗಳನ್ನು ತರಾಟೆಗೆ ತೆಗೆದುಕೊಳ್ಳಲು ಇಷ್ಟಪಡುವುದಾಗಿ ತಿಳಿಸಿದರು. 18 ವರ್ಷಗಳ ನಂತರ 2025ರಲ್ಲಿ ಆರ್ಸಿಬಿ ಅಹಮದಾಬಾದ್ನಲ್ಲಿ ತಮ್ಮ ಮೊದಲ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದೀಗ ಮಂಗಳವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಜಿಟಿ ವಿರುದ್ಧ 92 ರನ್ಗಳ ಗೆಲುವಿನ ನಂತರ ಸತತ ಎರಡನೇ ಫೈನಲ್ಗೆ ತಲುಪಿದ್ದಾರೆ.
ಪಾಟೀದಾರ್ ಅವರ 33 ಎಸೆತಗಳಲ್ಲಿ 93* ರನ್ಗಳು ಆರ್ಸಿಬಿಯನ್ನು ಐದು ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಲು ನೆರವಾಯಿತು. ಜೋಸ್ ಬಟ್ಲರ್ ಮತ್ತು ರಾಹುಲ್ ತೆವಾಟಿಯಾ ಅವರ ಕೆಲವು ಪ್ರತಿರೋಧದ ಹೊರತಾಗಿಯೂ, ಜೇಕಬ್ ಡಫಿ ಮತ್ತು ಭುವನೇಶ್ವರ್ ಕುಮಾರ್ ಪವರ್ಪ್ಲೇನಲ್ಲಿಯೇ ಅಗ್ರ-ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಜಿಟಿ ತಂಡದ ಬ್ಯಾಟಿಂಗ್ ಲೈನ್-ಅಪ್ ಅನ್ನು ಧ್ವಂಸಗೊಳಿಸಿದರು.
ಪಂದ್ಯದ ನಂತರ ಮಾತನಾಡಿದ ಪಾಟೀದಾರ್, ಆಕ್ರಮಣಕಾರಿ ಮನಸ್ಥಿತಿ ಮತ್ತು ಉತ್ತಮ ಬಾಡಿ ಲಾಂಗ್ವೇಜ್ ಅಗತ್ಯವನ್ನು ಒತ್ತಿ ಹೇಳಿದರು.
'ಇದು ನಮಗೆ ಒಂದು ಸೂಪರ್ ಪಂದ್ಯವಾಗಿತ್ತು ಮತ್ತು ಈ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಪ್ರಾಬಲ್ಯ ಸಾಧಿಸಿದ ರೀತಿ, ಎಲ್ಲರೂ ಇಂಟೆಂಟ್ನಿಂದ ಆಡಿದ ರೀತಿ, ಅದು ನಮಗೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಇದು ಸ್ಪಷ್ಟವಾದ ಯೋಜನೆಯಲ್ಲ (ಜಿಟಿ ಬೌಲರ್ಗಳನ್ನು ಕಾಡುವುದು). ಆದರೆ, ನಾವು ನಿಮಗಾಗಿ ಬರುತ್ತಿದ್ದೇವೆ ಎಂಬ ಬಾಡಿ ಲಾಂಗ್ವೇಜ್ ಅನ್ನು ನೀವು ತೋರಿಸಬೇಕಾಗಿರುವುದರಿಂದ ನಾವು ಅದಕ್ಕೆ ಸಿದ್ಧರಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಪ್ರತಿಯೊಬ್ಬ ಬ್ಯಾಟ್ಸ್ಮನ್ನಲ್ಲೂ ಅದು ಇತ್ತು ಎಂದು ನಾನು ಭಾವಿಸುತ್ತೇನೆ. ನಾವು ಸಭೆಯಲ್ಲಿ ಮಾತನಾಡಿದ್ದೇವೆ. ನಾವು ಉತ್ತಮ ಬಾಡಿ ಲಾಂಗ್ವೇಜ್ ಮತ್ತು ಆಕ್ರಮಣಕಾರಿ ಮನಸ್ಥಿತಿಯನ್ನು ಹೊಂದಿರಬೇಕು. ಇದೊಂದು ದೊಡ್ಡ ಹಂತ, ಕ್ವಾಲಿಫೈಯರ್ 1 ಮತ್ತು ನಾವು ಆಡಿದ ರೀತಿ, ಈ ಪಂದ್ಯದಲ್ಲಿ ನಾವು ಪ್ರಾಬಲ್ಯ ಸಾಧಿಸಿದ ರೀತಿ, ಅದು ಅದ್ಭುತವಾಗಿದೆ' ಎಂದು ಅವರು ಹೇಳಿದರು.
ಪಾಟೀದಾರ್ ಈ ವರ್ಷ ತಮ್ಮ ಜೀವಮಾನದ ಅತ್ಯುತ್ತಮ ಆವೃತ್ತಿಯನ್ನು ಆನಂದಿಸುತ್ತಿದ್ದಾರೆ. ಆಡಿರುವ 13 ಇನಿಂಗ್ಸ್ಗಳಲ್ಲಿ 44.18 ಸರಾಸರಿಯಲ್ಲಿ ಮತ್ತು 196.76 ಸ್ಟ್ರೈಕ್ ರೇಟ್ನೊಂದಿಗೆ 486 ರನ್ ಗಳಿದ್ದಾರೆ. ಇದರೊಂದಿಗೆ ಐದು ಅರ್ಧಶತಕಗಳು ಮತ್ತು 41 ಸಿಕ್ಸರ್ಗಳು ಸೇರಿವೆ.
ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ, 'ನನ್ನ ಬ್ಯಾಟಿಂಗ್ ವಿಧಾನವು (ತಮ್ಮ ತಂಡದ ಉಳಿದವರಂತೆಯೇ) ಇದೆ ಎಂದು ನಾನು ಭಾವಿಸುತ್ತೇನೆ. ಆರಂಭದಲ್ಲಿ, ವಿಕೆಟ್ ಹೇಗೆ ವರ್ತಿಸುತ್ತಿದೆ ಮತ್ತು ಚೆಂಡು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೋಡಲು ನಾನು ಕೆಲವು ಎಸೆತಗಳನ್ನು, 8-10 ಎಸೆತಗಳನ್ನು ತೆಗೆದುಕೊಳ್ಳುತ್ತೇನೆ. ಅದರ ನಂತರವೇ, ನಾನು ಬ್ಯಾಟಿಂಗ್ ಹೇಗೆ ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇನೆ. ನನ್ನ ವಿಕೆಟ್ ಬಗ್ಗೆ ನನಗೆ ಚಿಂತೆ ಇಲ್ಲ. ನಾನು ಯಾವಾಗಲೂ ಬೌಲರ್ ಅನ್ನು ಒತ್ತಡದಲ್ಲಿ ಇರಿಸಲು ಇಷ್ಟಪಡುತ್ತೇನೆ' ಎಂದು ಹೇಳಿದರು.
ವಿಕೆಟ್ ಸುಲಭವಲ್ಲ, ಅಲ್ಲಿ ಬ್ಯಾಟ್ಸ್ಮನ್ಗಳು ಔಟ್ ಕೂಡ ಆಗಬಹುದು ಅಥವಾ ದೀರ್ಘ ಸಿಕ್ಸರ್ಗಳನ್ನು ಹೊಡೆಯಬಹುದು. ಏಕೆಂದರೆ, ಬೌನ್ಸ್ ನಿಜವಾಗಿಯೂ ಚೆನ್ನಾಗಿತ್ತು. ಸ್ಟಂಪ್-ಟು-ಸ್ಟಂಪ್ ಬೌಲಿಂಗ್ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಕ್ಕಾಗಿ ಅವರು ತಮ್ಮ ಬೌಲರ್ಗಳನ್ನು ಶ್ಲಾಘಿಸಿದರು.
'ಜಿಟಿ ಇಲ್ಲಿಯವರೆಗೆ ಆಡಿದ ರೀತಿಯನ್ನು ನೋಡಿದರೆ, ಮೂವರು ಪ್ರಮುಖ ಬ್ಯಾಟ್ಸ್ಮನ್ಗಳು ಅಗ್ರ ಮೂವರು (ಗಿಲ್, ಸುದರ್ಶನ್ ಮತ್ತು ಬಟ್ಲರ್) ಎಂದು ನಾನು ಭಾವಿಸುತ್ತೇನೆ ಮತ್ತು ಅವರನ್ನು ಪವರ್ಪ್ಲೇನಲ್ಲಿ ಔಟ್ ಮಾಡಬೇಕು ಎಂಬುದು ನಮಗೆ ಸ್ಪಷ್ಟವಾಗಿತ್ತು ಮತ್ತು ಅದು ಕೆಲಸ ಮಾಡುತ್ತದೆ ಎಂದು ಆಶಿಸುತ್ತೇವೆ. ಇದು ಉತ್ತಮ ಚೇತರಿಕೆಯಾಗುತ್ತದೆ ಮತ್ತು ಫೈನಲ್ನಲ್ಲಿ ನಮ್ಮನ್ನು ಉತ್ತಮವಾಗಿಸುತ್ತದೆ" ಎಂದರು.
ಆರ್ಸಿಬಿ ಐಪಿಎಲ್ ಫೈನಲ್ಗೆ ತಲುಪಿದ್ದು ಇದು ಐದನೇ ಬಾರಿ. ಮುಂಬೈ ಇಂಡಿಯನ್ಸ್ (ಆರು ಬಾರಿ ಮತ್ತು ಐದು ಬಾರಿ ಪ್ರಶಸ್ತಿ ಗೆಲುವು) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (10 ಬಾರಿ ಮತ್ತು ಐದು ಬಾರಿ ಪ್ರಶಸ್ತಿ ಗೆಲುವು) ನಂತರ ಮೂರನೇ ಸ್ಥಾನದಲ್ಲಿದೆ.
ಇದು ಐಪಿಎಲ್ ನಾಕೌಟ್ಗಳ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಗೆಲುವಾಗಿದೆ. 2008ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಆರ್ಆರ್ನ 105 ರನ್ಗಳ ಗೆಲುವುಗಿಂತ ಕಡಿಮೆ.
Advertisement