
ಭಾರತದಾದ್ಯಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಸಂಭ್ರಮದಿಂದ ಬನಶಂಕರಿ, ಚಾಮುಂಡೇಶ್ವರಿ, ದುರ್ಗೆ, ಸರಸ್ವತಿ ಮುಂತಾದ ತಮ್ಮ ಇಷ್ಟದೇವತೆಗಳನ್ನು ಭಕ್ತಾದಿಗಳು ಭಕ್ತಿಭಾವದಿಂದ ಪೂಜಿಸುತ್ತಾರೆ. ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳನ್ನು ಸ್ತುತಿಸಲಾಗುತ್ತದೆ.
ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ.
ಮೈಸೂರಿನ ವಿಜಯ ದಶಮಿ ಗೆ ವಿಶೇಷ ಪಾರಂಪರಿಕ ಇತಿಹಾಸವಿದೆ. ಮೈಸೂರಿನ ಪ್ರಜೆಗಳು ಮಹಿಶಾಸುರನೆಂಬ ರಾಕ್ಷಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗಿರುತ್ತಾರೆ. ದೇವರಿಂದ ಮಹೋನ್ನತ ವರವನ್ನು ಪಡೆದ ಗರ್ವದಿಂದ ಮಹಿಷಾಸುರ ಎಲ್ಲರಿಗೂ ತೊಂದರೆ ಕೊಡಲು ಆರಂಭಿಸುತ್ತಾನೆ. ಮಹಿಷಾಸುರ ಕಾಟ ತಡೆಯಲಾಗದ ಇಂದ್ರಾದಿ ದೇವತೆಗಳು ಮತ್ತು ಮೈಸೂರು ಪ್ರಜೆಗಳು ಎಲ್ಲರೂ ಸೇರಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತಾರೆ.
ಮಹಿಶಾಸುರನಿಂದ ತಮಗಾಗುತ್ತಿರುವ ಉಪಟಳದಿಂದ ಪಾರು ಮಾಡುವಂತೆ ಕೇಳಿಕೊಳ್ಳುತ್ತಾರೆ. ಆಗ ತಾಯಿ ಚಾಮುಂಡೇಶ್ವರಿಯು ಉಗ್ರ ರೂಪ ತಳೆದು ಘೋರ ಯುದ್ಧ ಮಾಡಿ ಮಹಿಶಾಸುರನನ್ನು ಕೊಂದು ಪ್ರಜೆಗಳನ್ನು ಕಾಪಾಡುತ್ತಾಳೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ.
ಮಹಾಭಾರತದ ಉಲ್ಲೇಖ
ಇನ್ನು ಮಹಾಭಾರತದಲ್ಲಿ ಆಯುಧ ಪೂಜೆಯ ಸ್ಪಷ್ಟ ಉಲ್ಲೇಖವಿದ್ದು, ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸುತ್ತಾರೆ. ಬಳಿಕ ಒಂದು ವರ್ಷ ಅಜ್ಞಾತವಾಸ ಮುಗಿಸುತ್ತಾರೆ. ಈ ಅಜ್ಞಾತವಾಸದ ಅಂತಿಮ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಬನ್ನಿ ಮರದಲ್ಲಿ ಬಚ್ಚಿಡುತ್ತಾರೆ. ವಿಜಯದಶಮಿ ಅಂದರೆ ತಮ್ಮ ಅಜ್ಞಾತವಾಸ ಮುಗಿದ ದಿನದಂದು ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ.
Advertisement