ಚಿನ್ನದ ಅಂಬಾರಿ ಹಿಂದಿರುವ ರೋಚಕ ಕಥೆ ಹಾಗೂ ಇತಿಹಾಸ

ಭಾರತದಲ್ಲಿರುವ ಪ್ರತೀಯೊಂದು ಹಬ್ಬ ಆಚರಣೆಯಲ್ಲಿಯೂ ಒಂದೊಂದು ರೀತಿಯ ವಿಶೇಷ ಹಾಗೂ ಪ್ರತೀತಿ ಇದೆ. ಹಾಗೆಯೇ ದಸರಾ ಹಬ್ಬಕ್ಕೂ ತನ್ನದೇ ಆದ ಪ್ರತೀತಿ ಹಾಗೂ ವಿಶೇಷತೆ. ವಿಶ್ವವಿಖ್ಯಾತ ಮೈಸೂರು ಎಂದಾಕ್ಷಣ ಎಲ್ಲರಿಗೂ...
ಚಿನ್ನದ ಅಂಬಾರಿ ಹಿಂದಿರುವ ರೋಚಕ ಕಥೆ ಹಾಗೂ ಇತಿಹಾಸ
ಚಿನ್ನದ ಅಂಬಾರಿ ಹಿಂದಿರುವ ರೋಚಕ ಕಥೆ ಹಾಗೂ ಇತಿಹಾಸ
Updated on

ಭಾರತದಲ್ಲಿರುವ ಪ್ರತೀಯೊಂದು ಹಬ್ಬ ಆಚರಣೆಯಲ್ಲಿಯೂ ಒಂದೊಂದು ರೀತಿಯ ವಿಶೇಷ ಹಾಗೂ ಪ್ರತೀತಿ ಇದೆ. ಹಾಗೆಯೇ ದಸರಾ ಹಬ್ಬಕ್ಕೂ ತನ್ನದೇ ಆದ ಪ್ರತೀತಿ ಹಾಗೂ ವಿಶೇಷತೆ. ವಿಶ್ವವಿಖ್ಯಾತ ಮೈಸೂರು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮೈಸೂರು ಅರಮನೆ, ಆನೆ, ಅಂಬಾರಿ... ಮೈಸೂರು ಅರಮನೆ, ದಸರಾ ಹಾಗೂ ಅಂಬಾರಿ ಹೊರುವ ಆನೆಯ ಇತಿಹಾಸದ ಕಥೆಗಳು ಸಾಕಷ್ಟು ಜನರಿಗೆ ತಿಳಿದಿರುತ್ತದೆ. ಆದರೆ, ಅದೆಷ್ಟೋ ಮಂದಿಗೆ ಅಂಬಾರಿ ಬಗೆಗಿನ ಇತಿಹಾಸ ಹಾಗೂ ಅದರ ಮೂಲ ತಿಳಿದಿಲ್ಲ.

ದಸರಾ ಹಬ್ಬದ ಸಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆಯೇ ಈ ಅಂಬಾರಿ. ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಿಯೇ ಈ ಮೆರವಣಿಗೆಯ ಪ್ರಮುಖ ಆಕರ್ಷಣೆ. ರಸ್ತೆಯ ಮೂಲೆಮೂಲೆಗಳಲ್ಲಿ ಜನಸಾಗರವೇ ಈ ಅಂಬಾರಿಯನ್ನು ನೋಡುತ್ತಿರುತ್ತದೆ. ತಾಯಿಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತು ಬಲರಾಮನು ಬನ್ನಿ ಮಂಟಪದತ್ತ ಹೋಗುವ ದೃಶ್ಯ ನೋಡುಗರನ್ನು ಮನಸೂರೆಗೊಳಿಸುತ್ತದೆ.

ಇಂತಹ ಅಂಬಾರಿಯ ಕತೆ ಹಾಗೂ ಅದರ ಮೂಲದ ಬಗೆಗಿನ ಮಾಹಿತಿ ಇಲ್ಲಿದೆ...

ಮೈಸೂರು ದಸರಾ ಉತ್ಸವದಲ್ಲಿ ಗಮನ ಸೆಳೆಯುವುದು ರತ್ನ ಖಚಿತ 750 ಕೆಜಿ ತೂಕದ ತಾಯಿಚಾಮುಂಡೇಶ್ವರಿಯ ಅಂಬಾರಿ. ಈ ಅಂಬಾರಿಯ ಮೂಲ ಹಾಗೂ ನಡೆದು ಬಂದ ದಾರಿಯಲ್ಲಿ ರೋಚಕತೆಯಿದೆ. ಅಂಬಾರಿಯ ನಂಟು ಕೊಪ್ಪಳದ ಕುಮ್ಮಟದುರ್ಗಕ್ಕೂ ಇದೆ. ಅಂಬಾರಿಯು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಏನಿದರ ಇತಿಹಾಸ?...

ಮಹಾರಾಷ್ಟ್ರದ ದೇವಗಿಯಲ್ಲಿ ಮೂಲತಃ ಈ ರತ್ನ ಖಚಿತ ಅಂಬಾರಿ ಇತ್ತು. ದೇವಗಿರಿ ನಾಶವಾದ ವೇಳೆ ಇದನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕ ಎನ್ನುವವರಿಗೆ ಹಸ್ತಾಂತರ ಮಾಡಿ, ಕಾಪಾಡುವಂತೆ ಕೋರಲಾಗಿರುತ್ತದೆ. ಮುಮ್ಮಡಿ ಸಿಂಗ ನಾಯಕ ಇದನ್ನು ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಮುಚ್ಚಿಟ್ಟಿರುತ್ತಾರೆ. ಈತರ ಮಗ ಕಂಪಿಲರಾಯ ರಾಜ್ಯ ವಿಸ್ತರಿಸುತ್ತಾನೆ. ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಈ ಪೂಜೆಯನ್ನು ಮಗ ಯುವರಾಜನ ಕಾಲದಲ್ಲಿಯೂ ನಡೆಯುತ್ತದೆ.

1327ರಲ್ಲಿ ದೆಹಲಿ ಸುಲ್ತಾನರು ದಾಳಿಗೆ ಕಂಪಿಲ ರಾಜ್ಯ ನಾಶವಾಗುತ್ತದೆ. ಆಗ ಭಂಡಾರ ಸಂರಕ್ಷಣೆ ಮಾಡುತ್ತಿದ್ದ ಹಕ್ಕಬುಕ್ಕರು ಈ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು ಕಾಣೆಯಾಗುತ್ತಾರೆ. 1336ರ ವೇಳೆಗೆ ದೆಹಲಿ ಸುಲ್ಾನರು ನಾಶವಾದ ಸಮಯದಲ್ಲಿ ಪುನಃ ರಾಜ್ಯ ಸ್ಥಾಪಿಸುವುದಕ್ಕೆ ಹಕ್ಕ ಮುಂದಾಗುತ್ತಾನೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಲಾಗುತ್ತದೆ. ಇದು ವಿಜಯನಗರ ಸಾಮ್ರಾಜ್ಯದ ಮೊದಲನೇ ರಾಜಧಾನಿ. ನಂತರ ಬುಕ್ಕನು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿ ಸ್ಥಾಪನೆ ಮಾಡುತ್ತಾನೆ. ಅಲ್ಲಿಗೆ ಈ ಅಂಬಾರಿ ಸ್ಥಳಾಂತರ ಮಾಡಲಾಗುತ್ತದೆ.

ಸಂಗಮ, ಸಾಳವ, ತುಳು ಹಾಗೂ ಅರವಿಡು ಎನ್ನುವ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಮಾಡುತ್ತವೆ. ಇದು ನಾಶವಾದಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡುಲಾಗುತ್ತದೆ. ಬಳಿಕೆ ಕೆಲವು ವರ್ಷದ ನಂತರ ಶ್ರೀರಂಗಪಟ್ಟಣ, ಆದಾದ ನಂತರ ಮೈಸೂರಿಗೆ ಬರುತ್ತದೆ. ಹೀಗೆ ಅಂಬಾರಿ ಹಲವು ರೋಚಕತೆಯ ಮೂಲಕ ಇಂದು ಮೈಸೂರಿನಲ್ಲಿ ನೆಲೆಯೂರಿದೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com