ಬೆಂಗಳೂರು: ಬೆರಳ ತುದಿಯಲ್ಲಿ ಆಡಳಿತ ತರಲು ಹೊರಟಿರುವ ರಾಜ್ಯ ಸರ್ಕಾರ ಆಕರ್ಷಕ ಆಹ್ವಾನ ಪತ್ರಿಕೆ ಮೂಲಕ ಮೊದಲ ಬಾರಿಗೆ ಆಮಂತ್ರಣಕ್ಕೂ ಹೈಟೆಕ್ ಸ್ಪರ್ಶ ನೀಡಿದೆ.
ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಯ ದೊಡ್ಡ ಹೆಸರು, ಭಾವಚಿತ್ರ, ಜತೆಗೆ ಸಚಿವರೆಲ್ಲರ ಪಟ್ಟಿ...ಹೀಗೆ ಓದಲಾಗದಷ್ಟು ಹೆಸರುಗಳಿರುತ್ತವೆ. ನೋಡಲೂ ಬೇಸರವಾಗುತ್ತದೆ. ಆದೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾಪ ಮೊಬೈಲ್ನಂತೆ ಭಾಸವಾಗುವ ಆಹ್ವಾನ ಪತ್ರಿಕೆ ರೂಪಿಸಿದೆ. ಇದನ್ನು ಮಾಧ್ಯಮ ಕಚೇರಿಗೆ ತಲುಪಿಸಿದ ಕವರ್ ಕೂಡಾ ಮೊಬೈಲ್ ಕೊರಿಯರ್ ರೂಪದಲ್ಲಿದೆ. ಮೊಬೈಲ್ ಆಮಂತ್ರಣದ ಮೊದಲ ಪುಟ ತೆರೆಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಧ್ವನಿ!
ಸ್ವತಃ ಮುಖ್ಯಮಂತ್ರಿಯೇ ಅವರ ಧ್ವನಿಯಲ್ಲಿಯೇ ಆಮಂತ್ರಣ ರೆಕಾರ್ಡ್ ಮಾಡಿ ಕಳುಹಿಸಲಾಗಿದೆ . ಜತೆಗೆ ಮುದ್ರಿತ ಆಮಂತ್ರಣವೂ ಇದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಡಿ.8ರಂದು ಮೊಬೈಲ್ ಒನ್ ಸೇವೆಯನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ಜನತೆಗೆ ನೇಡ ಹೊರಟಿರುವ ಸೇವೆಯ ಉದ್ದೇಶ ಏನೆಂಬುದನ್ನು ಆಮಂತ್ರಣ ಪತ್ರಿಕೆ ಮೂಲಕವೇ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿ ಇಂಥದ್ದೊಂದು ಆಕರ್ಷಕ ಹಾಗೂ ವಿನೂತನ ಆಹ್ವಾನ ಪತ್ರಿಕೆ ಪ್ರಕಟವಾದದ್ದು ನೆನಪಿಲ್ಲ.
ಪತ್ರಿಕೆ ಹೊರ ನೋಟದಲ್ಲಿ ಐದೂವರೆ ಇಂಚಿನ ಬಿಳಿ ಬಣ್ಣದ ಸ್ಮಾರ್ಟ್ಫೋನ್ನಂತೆ ಕಾಣುತ್ತದೆ. ಒಳಗಿನ ಪುಟ ತೆರೆದರೆ 'ಡಿಯರ್ ಸಿಟಿಜನ್ಸ್ ಆಫ್ ಕರ್ನಾಟಕ' ಎಂದು ಸಿದ್ಧರಾಮಯ್ಯ ಅವರು ಆತ್ಮೀಯವಾಗಿ 'ಮೊಬೈಲ್ ಒನ್' ಸೇವೆ ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಾರೆ. ಕನ್ನಡದಲ್ಲಿಯೂ ಧ್ವನಿ ಮುದ್ರಣವಿದೆ. ಹಾಗೆಯೇ ಈ ಸೇವೆಯ ಉದ್ದೇಶವನ್ನು ವಿವರಿಸುತ್ತಾರೆ. ಆಮಂತ್ರಣ ಪತ್ರಿಕೆಯ ಹಿಂಬದಿಯಲ್ಲಿಯೂ ಕ್ಯಾಮೆರಾ ಚಿತ್ರ ನಮೂದಿಸಲಾಗಿದೆ. ಆ ಮೂಲಕ ಆಮಂತ್ರಣ ಪತ್ರಿಕೆ ರೂಪಿಸುವಾಗ ಅಚ್ಚುಕಟ್ಟುತನವನ್ನು ನಿರ್ವಹಿಸಲಾಗಿದೆ.
ಸರ್ಕಾರ ಆಸಕ್ತಿವಹಿಸಿ ಕೆಲಸ ಮಾಡಿದರೆ ಹೊಸತನ ಮೂಡಿಬರುತ್ತದೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿ. ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿದಾಗ ಸಂಗ್ರಹಿಸಿಡಬೇಕು ಎನ್ನುವ ಹಾಗೆ ರೂಪಿಸಿದ ಕೀರ್ತಿ ಸರ್ಕಾರದ್ದು.
Advertisement