ಬೆಂಗಳೂರು: ಎಂಟಿಎಂನಲ್ಲಿ ಹಣ ಡ್ರಾ ಮಾಡಲು ಬಂದ ಮಹಿಳೆಯಗೆ ಬೆದರಿಕೆ ಹಾಕಿ ಹಣ ದೋಚಲು ಯತ್ನಿಸಿದ ಯುವಕರಿಬ್ಬರಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿತ ನೀಡಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನ ವಸಂತ ನಗರದಲ್ಲಿ ನಡೆದಿದೆ.
ಕಳೆದ ನವೆಂಬರ್ನಲ್ಲಿ ಬೆಂಗಳೂರಿನ ಕಾರ್ಪೋರೇಷನ್ ವೃತ್ತದ ಎಟಿಎಂನಲ್ಲಿ ಮಹಿಳೆಯ ಮೇಲೆ ಹಲ್ಲೆ ಮತ್ತು ದರೋಡೆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ದೇಶಾದ್ಯಂತ ಬಾರಿ ತಲ್ಲಣ ಉಂಟುಮಾಡಿತ್ತು. ಘಟನೆ ಸಂಭವಿಸಿದ ಒಂದು ವರ್ಷವಾಗಿದ್ದರೂ ಆರೋಪಿಯ ಬಂಧನವಾಗಿಲ್ಲ.
ಆರೋಪಿಯ ಬಂಧನಕ್ಕೆ ಪೊಲೀಸ್ ಇಲಾಖೆ ವಿಶೇಷ ತಂಡವನ್ನು ಸಹ ರಚಿಸಿದ್ದು, ಆರೋಪಿಗಾಗಿ ಜಾಲ ಬೀಸಿದ್ದಾರೆ. ಈ ಘಟನೆಯ ಬಳಿಕ ಎಲ್ಲ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಯಿತು.
ಈ ಘಟನೆ ಮಾಸುವ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಂತಹದ್ದೇ ಮತ್ತೊಂದು ಯತ್ನಕ್ಕೆ ಇಬ್ಬರು ಮುಂದಾಗಿದ್ದು, ಅದು ವಿಫಲಗೊಂಡಿದೆ.
ನೆನ್ನೆ ಸಂಜೆ ವಸಂತ್ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾಮಾಡಲು ಯುವತಿಯರಿಬ್ಬರು ಬಂದಿದ್ದರು. ಭದ್ರತಾ ಸಿಬ್ಬಂದಿ ಇಲ್ಲದಿದ್ದ ಆ ಎಟಿಎಂನಲ್ಲಿ ಇಬ್ಬರು ಯುವತಿಯರು ಹಣ ಡ್ರಾ ಮಾಡುತ್ತಿದ್ದರು. ಈ ವೇಳೆ ಯುವಕರಿಬ್ಬರು ಎಟಿಎಂ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ತಮ್ಮಲ್ಲಿರುವ ಹಣ ಮತ್ತು ಮೊಬೈಲ್ಗಳನ್ನು ನೀಡುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಪ್ರಾಣಭಯದಿಂದ ಇಬ್ಬರು ಯುತಿಯರು ತಮ್ಮಲ್ಲಿದ್ದ ಹಣ ಹಾಗೂ ಮೊಬೈಲ್ನ್ನು ಒಪ್ಪಿಸಿದ್ದಾರೆ.
ಎಟಿಎಂನಿಂದ ಇಬ್ಬರು ಯುವಕರು ಹೊರಬರುತ್ತಿದ್ದಂತೆ, ಯುವತಿಯರಿಬ್ಬರು ಹೊರ ಬಂದು ಕಿರುಚಾಟ ನಡೆಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸಾರ್ವಜನಿಕರು, ಕೂಡಲೇ ಆ ಇಬ್ಬರು ಯುವಕರನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಸಾರ್ವಜನಿಕರೇ ಅವರಿಗೆ ಹಿಗ್ಗಾಮುಗ್ಗಾ ಥಳಿತ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಪೊಲೀಸ್ ಇಲಾಖೆ ಎಟಿಎಂ ಕೇಂದ್ರಗಳಲ್ಲಿ ಮತ್ತಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಮುನ್ಸೂಚನೆ ನೀಡಿದೆ.
Advertisement