ಮೈಸೂರು: ನಕ್ಸಲ್ ಹಿನ್ನಲೆಯುಳ್ಳ ಗೌರಿ ಲಂಕೇಶ್ ಅವರನ್ನು ನಕ್ಸಲ್ ಪುನರ್ವಸತಿ ಜಾರಿ ಸಮಿತಿಯಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಆಗ್ರಹಿಸಿದರು.
ರಾಜ್ಯ ಸರ್ಕಾರ ನಕ್ಸಲ್ ಪರವಾದ, ಹಿನ್ನೆಲೆಯಲ್ಲಿ ಮತ್ತು ಒಲವುಳ್ಳ ಗೌರಿ ಲಂಕೇಶ್ ಅವರನ್ನು ನಕ್ಸಲ್ ಪುನರ್ವಸತಿ ಜಾರಿ ಸಮಿತಿಗೆ ನೇಮಿಸುವ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದೆ. ನಕ್ಸಲ್ ಸಂಘಟನೆ ಜತೆ ಗುರಿತಿಸಿಕೊಂಡವರನ್ನೇ ಸಮಿತಿಗೆ ನೇಮಿಸಿರುವುದು ಸರಿಯಾದ ಕ್ರಮವಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಇತ್ತೀಚೆಗೆ ಚಿಕ್ಕಮಗಳೂರಿನ ಪ್ರದೇಶದಲ್ಲಿ ನಕ್ಸಲರು ಮತ್ತು ನಕ್ಸಲ್ ನಿಗ್ರಹ ಪಡೆ ಮುಖಾಮುಖಿ ಆಗಬೇಕಿತ್ತು. ಆದರೆ ನಕ್ಸಲ್ ನಿಗ್ರಹ ಪಡೆಯವರೇ ನಕ್ಸಲರಿಗೆ ದಾರಿ ಬಿಟ್ಟು ಹೋಗಿದ್ದಾರೆ.
ಏಕೆಂದರೆ ಗೋಹತ್ಯ ಮಾಡಿದ್ದ ಮತ್ತು ನಕ್ಸಲ್ ಪಡೆ ಜತೆ ಗುರುತಿಸಿಕೊಂಡಿದ್ದ ಕಬೀರ್ನನ್ನು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿ ನವೀನ್ ನಾಯಕ್ ಅವರನ್ನು ಅದೇ ಸರ್ಕಾರ ಜೈಲಿಗೆ ಕಳುಹಿಸಿತು. ಕಬೀರ್ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಘೋಷಿಸಿತು. ಇವೆಲ್ಲವೂ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗಿದೆ. ಆ ಕಾರಣದಿಂದಲೆ ನಕ್ಸಲರಿಗೆ ಪೊಲೀಸ್ ಪಡೆ ದಾರಿಬಿಟ್ಟಿದೆ ಎಂದು ವಿವರಿಸಿದರು.
ಗೌರಿ ಲಂಕೇಶ್ ಅವರ ಅಗತ್ಯವಿದ್ದರೆ ಸಂಧಾನಕಾರರಾಗಿ ಬಳಸಿಕೊಳ್ಳಲಿ. ಈಗ ಇಬ್ಬರು ನಕ್ಸಲ್ ಮುಖಂಡರು ಶರಣಾಗುತ್ತಿರುವುದರ ಹಿಂದೆ ಏನೋ ಸಂಚು ಇರುವ ಶಂಕೆ ಇದೆ. ಇವರನ್ನು ಬಿಡುಗಡೆಗೊಳಿಸಿ ಮತ್ತಷ್ಟು ಮಂದಿ ಯುವಕರನ್ನು ಉತ್ತೇಜಿಸಿ ನಕ್ಸಲ್ ಪಡೆಗೆ ನೇಮಿಸಿಕೊಳ್ಳುವ ಸಾಧ್ಯತೆಯೂ ಇದೆ. ಈ ಬಗ್ಗೆ ಈಗಲೆ ಎಚ್ಚರಿಕೆ ವಹಿಸದಿದ್ದರೆ ಮುಂದೆ ರಾಜ್ಯ ಬೆಲೆ ತೆರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Advertisement