ಬೆಂಗಳೂರು: ಸೃಷ್ಟಿ ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ಗುರುಮೂರ್ತಿ ವಿರುದ್ಧ ವಂಚನೆ ಆರೋಪದಡಿ ದೂರು ನೀಡಿದ್ದ ಚಂದ್ರ ಲೇಔಟ್ ನಿವಾಸಿ ಡಾನ್ ಬಾಸ್ಕೋ ಅವರು ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದಾರೆ.
ಗುರುಮೂರ್ತಿ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯುವಂತೆ ಡಾನ್ ಅವರಿಗೆ ಕಳೆದ ಕೆಲ ತಿಂಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಹಾಗಾಗಿ ಆ ಸಂಸ್ಥೆ ಕಡೆಯವರೇ ಅವರನ್ನು ಅಪಹರಿಸಿರಬಹುದು ಎಂದು ಆರೋಪಿಸಿ ರಾಜ್ಯ ಪುರುಷ ಸಂಘದ ಅಧ್ಯಕ್ಷ ಬಿ.ಎಸ್.ಗೌಡ ಅವರು ಮಲ್ಲೇಶ್ವರದ ಮಂತ್ರಿ ಮಹಲ್ನಲ್ಲಿರುವ ಆನ್ಲೈನ್ ದೂರು ದಾಖಲು ಕೇಂದ್ರದಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ದೂರು ದಾಖಲಿಸಲು ಸಂಘದ ಸದಸ್ಯರು ಉಪ್ಪಾರಪೇಟೆ, ಚಿಕ್ಕಪೇಟೆ, ನಂದಿನಿಲೇಔಟ್, ಚಂದ್ರಲೇಔಟ್ ಠಾಣೆಗಳಿಗೆ ಅಲೆದರೂ ಪ್ರಯೋಜನವಾಗದ ಕಾರಣ ಆನ್ಲೈನ್ನಲ್ಲಿ ದೂರು ದಾಖಲಿಸಿದ್ದಾಗಿ ದೂರುದಾರರು ತಿಳಿಸಿದ್ದಾರೆ. ಡಾನ್ ಅವರು ಸಂಘದ ಸದಸ್ಯರಾಗಿದ್ದು, ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು. ಈ ಬಗ್ಗೆ ಸಂಘಕ್ಕೆ ತಿಳಿಸಿದ್ದರು. ನವೆಂಬರ್ 30ರಂದು ಸಹ ಸಂಘದ ಕಚೇರಿಗೆ ಭೇಟಿ ನೀಡಿದ್ದರು. 1ನೇ ತಾರೀಖಿನಿಂದ ಅವರು ನಾಪತ್ತೆಯಾಗಿದ್ದು, ಪೊಲೀಸರು ತಮ್ಮನ್ನು ಕರೆಸಿ ಡಾನ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅವರ ಫೋಟೋ ನೀಡುವಂತೆ ತಿಳಿಸಿದ್ದಾರೆ ಎಂದು ಗೌಡ ತಿಳಿಸಿದ್ದಾರೆ.
Advertisement