"ಜಾಲಾಟ"ದ ಮೇಲಿನ್ನು ಕಾವಲುಗಣ್ಣು

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಲ್ಯಾಬ್ ಸ್ಥಾಪನೆ, ಸ್ವಯಂ ಪ್ರೇರಿತ ದೂರು..
ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಲ್ಯಾಬ್ ಸ್ಥಾಪಿಸಲು ಬೆಂಗಳೂರು ಪೊಲೀಸರ ನಿರ್ಧಾರ (ಸಂಗ್ರಹ ಚಿತ್ರ)
ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಲ್ಯಾಬ್ ಸ್ಥಾಪಿಸಲು ಬೆಂಗಳೂರು ಪೊಲೀಸರ ನಿರ್ಧಾರ (ಸಂಗ್ರಹ ಚಿತ್ರ)
Updated on

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಲ್ಯಾಬ್ ಸ್ಥಾಪನೆ, ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲು ಅವಕಾಶ
-ಮಂಜುನಾಥ್ ನಾಗಲೀಕರ್
ಬೆಂಗಳೂರು:
ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ದೇಶ ದ್ರೋಹಿ ಕೃತ್ಯಗಳಿಗೆ ಪ್ರಚೋದನೆ, ಧರ್ಮ ನಿಂದನೆ ಇತ್ಯಾದಿ ಸಮಾಜ ವಿರೋಧಿ ಪೋಸ್ಟ್‌ಗಳ ಮೇಲೆ ಇನ್ನು ಪೊಲೀಸರು ನಿಗಾ ಇರಿಸಲಿದ್ದಾರೆ.

ಇದಕ್ಕಾಗಿಯೇ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಲ್ಯಾಬ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಫೇಸ್‌ಬುಕ್ ಅಥವಾ ಟ್ವಿಟರ್‌ನಲ್ಲಿ ಯಾವುದೇ ವ್ಯಕ್ತಿ, ಸಮುದಾಯ, ಸಂಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್‌ಗಳು ಬಂದರೆ, ಅದನ್ನು ನೊಂದವರು ಗಮನಿಸಿ ದೂರು ನೀಡಿದರೆ ಮಾತ್ರ ಈ ವರೆಗೂ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯು ಸ್ವಯಂಪ್ರೇರಿತ ದೂರು ದೂಖಲಿಸಿಕೊಂಡು, ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುತ್ತದೆ.

ಉಗ್ರ ಸಂಘಟನೆ ಇಸಿಸ್ ನೇಮಕಕ್ಕೆ ಪ್ರಚೋದನೆ ನೀಡಲು ಮೆಹ್ದಿಯ 'ಶಮಿವಿಟ್ನೆಸ್‌' ಟ್ವಿಟರ್ ಅಕೌಂಟ್ ಪ್ರಭಾವಿ ವೇದಿಕೆಯಾಗಿತ್ತು. ವಿದೇಶಿ ಮಾಧ್ಯಮಗಳೇ ಇದನ್ನು ಪತ್ತೆ ಹಚ್ಚಿರುವಾಗ ರಾಜ್ಯದಲ್ಲಿ ಅಂತಹ ವ್ಯವಸ್ಥೆ ಇಲ್ಲ ಎನ್ನುವ ಆರೋಪ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವ ಘಟಕ ಸ್ಥಾಪಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ದೇಶದಲ್ಲಿ ಮುಂಬೈನಲ್ಲಿ ಮಾತ್ರ ಇಂಥ ಘಟಕ ಇದ್ದು, ಅದರ ಕಾರ್ಯ ನಿರ್ವಹಣೆಯನ್ನು ನೋಡಿಕೊಂಡು ಬರಲಾಗಿದೆ. ಅದಕ್ಕಿಂತಲೂ ಉತ್ತಮ ಘಟಕವನ್ನು ನಗರ ಪೊಲೀಸ್ ವಿಭಾಗದಲ್ಲಿ ಸ್ಥಾಪಿಸಲಾಗುವುದು.

-ಎಂ.ಎನ್.ರೆಡ್ಡಿ
ಬೆಂಗಳೂರು ನಗರ ಪೊಲೀಸ್ ಆಯುಕ್ತ


ಉದ್ದೇಶ ಏನು?
ಪ್ರಭಾವಶಾಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳ ಜನರ ಮೂಡ್ ಅನ್ನು ಭಾವನಾತ್ಮಕವಾಗಿ ಕೆರಳಿಸುವ ಅಥವಾ ಅನುಕಂಪದ ಹುಟ್ಟಿಸುವ ಸಾಮರ್ಥ್ಯ ಹೊಂದಿರುತ್ತವೆ. ಪ್ರತಿಯೊಬ್ಬರ ಮೇಲೂ ನಿರ್ದಿಷ್ಟ ವಿಷಯಗಳು ಚರ್ಚೆಗೆ ಬಂದಾಗ ಈ ವಿಶೇಷ ಘಟಕ ಅವುಗಳ ಮೇಲೆ ನಿಗಾ ಇರಿಸಲಿದೆ.

ಅವುಗಳಿಂದ ಸಮಾಜಕ್ಕೆ ತೊಂದರೆ ಉಂಟಾಗುತ್ತದೆ ಎಂದು ಕಂಡುಬಂದಲ್ಲಿ ಅದರ ಸೂತ್ರಧಾರರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವ ಉದ್ದೇಶ ಘಟಕದ್ದು. ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಘಟಕ ಕಾರ್ಯನಿರ್ವಹಿಸಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಳ್ಳುವವರನ್ನು ತಾಂತ್ರಿಕ ಸಹಾಯದಿಂದ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಘಟಕ ಸ್ಥಾಪನೆಯ ಉದ್ದೇಶ.

ನಿರ್ವಹಣೆ ಹೇಗೆ?
ಅಜ್ಞಾತ ಸ್ಥಳದಲ್ಲಿ ನಿಗಾ ಘಟಕ ಕಾರ್ಯ ನಿರ್ವಹಿಸಲಿದೆ. ಸಮಾಜ ವಿರೋಧಿ, ಪ್ರಚೋದನಾತ್ಮಕ, ಭಾವನಾತ್ಮಕವಾಗಿ ಕೆರಳಿಸುವ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದರೆ ಅದರ ಮೇಲೆ ನಿಗಾ ಇಡಲಾಗುತ್ತದೆ. ಅವುಗಳ ಸೂತ್ರಧಾರರು ಹಾಗೂ ಸ್ಥಳದ ಬಗ್ಗೆ ತನಿಖೆ ನಡೆಸಿ ತಾಂತ್ರಿಕ ನೆರವಿನೊಂದಿಗೆ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಇನ್ನೆರಡು ವಾರದಲ್ಲಿ ಸ್ಥಾಪನೆ
ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ನೇತೃತ್ವದಲ್ಲಿ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಮಾನಿಟರಿಂಗ್ ಲ್ಯಾಬ್ ಕಾರ್ಯನಿರ್ವಹಿಸಲಿದೆ. ಇನ್ನೆರಡು ವಾರದಲ್ಲೇ ಘಟಕವನ್ನು ಸ್ಥಾಪಿಸಲಾಗುವುದು. ಗೋಯಲ್ ನೇತೃತ್ವದ ತಂಡ ಮುಂಬೈಗೆ ಭೇಟಿ ನೀಡಿ ಅಲ್ಲಿನ ಘಟಕದ ಕಾರ್ಯನಿರ್ವಹಣೆಯನ್ನು ತಿಳಿದುಕೊಂಡು ಬಂದಿದೆ. ಸಾಮಾಜಿಕ ಜಾಲತಾಣ ಬಳಕೆದಾರ ಖಾಸಗಿತನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಈ ಘಟಕ ಕಾರ್ಯನಿರ್ವಹಿಸಲಿದೆ ಎಂದು 'ಕನ್ನಡಪ್ರಭ'ಕ್ಕೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com