ಬೆಂಗಳೂರು: ನಗರದ ಸ್ಮಶಾನಗಳು ಮತ್ತು ಚಿತಾಗಾರಗಳ ದಯನೀಯ ಸ್ಥಿತಿಯನ್ನು ಕಂಡು ಆಘಾತಗೊಂಡಿರುವ ಮೇಯರ್ ಶಾಂತಕುಮಾರಿ, ಇವುಗಳ ಸೌಕರ್ಯಗಳನ್ನು ಉತ್ತಮಪಡಿಸಲು ೨೦ ಲಕ್ಷ ನೀಡುವುದಾಗಿ ಮಂಗಳವಾರ ವಚನ ನೀಡಿದ್ದಾರೆ.
ಮೈಸೂರು ರಸ್ತೆ, ಹಳೇಗುಡ್ಡಹಳ್ಳಿ, ಜೈ ಭೀಮನಗರ ಮತ್ತು ಇತರ ಪ್ರದೇಶಗಳ ಸ್ಮಶಾನಗಳು ಮತ್ತು ಚಿತಾಗಾರಗಳನ್ನು ವೀಕ್ಷಿಸಿದ ಮೇಯರ್, ಇಲ್ಲಿ ಬೇಕಾದ ಮೂಲ ಸೌಕರ್ಯಗಳ ಪಟ್ಟಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳನ್ನು ಮತ್ತು ನಿರ್ವಹಣಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್, ಸ್ಮಶಾನಗಳಲ್ಲಿ ಮತ್ತು ಚಿತಾಗಾರಗಳಲ್ಲಿ ಸ್ವಚ್ಚತೆ ಕಾಪಾಡುವಂತೆ ಸೂಚಿಸಿದ್ದಾರೆ. ಹಾಗೆಯೇ ಸ್ಮಶಾನಗಳಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದಿರುವ ಕಳೆ ಮತ್ತು ಕುರುಚಲು ಗಿಡಗಳನ್ನು ಕೀಳುವಂತೆ ಕೂಡ ಸೂಚಿಸಿದ್ದಾರೆ ಎನುತ್ತದೆ ಬಿಬಿಎಂಪಿ ಪತ್ರಿಕಾ ಹೇಳಿಕೆ.
"ಒಬ್ಬ ಬದುಕಿದ್ದಾಗಲೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ, ಸತ್ತ ನಂತರವೂ ಅವರ ಆತ್ಮಕ್ಕೆ ಶಾಂತಿ ಸಿಗದಂತೆ ಮಾಡುತ್ತೀರಿ" ಎಂದಿದ್ದಾರೆ ಮೇಯರ್.
ಬನಶಂಕರಿಯ ಸ್ಮಶಾನದ ಸುತ್ತುಗೋಡೆಯ ಒಂದು ಪಾರ್ಶ್ವ ಕುಸಿದಿದ್ದು, ನೈರ್ಮಲ್ಯದ ಕೊರತೆಯೂ ಇದೆ. ಅಷ್ಟೇ ಅಲ್ಲದೆ, ವಿದ್ಯುತ್ ತೊಂದರೆ ಹಾಗೂ ನೀರಿನ ಪೂರೈಕೆ ಕೂಡ ಸಮರ್ಪಕವಾಗಿಲ್ಲ. ಗೋಡೆಯನ್ನು ಮರು ನಿರ್ಮಿಸಿ, ಅದಕ್ಕೆ ಗೇಟ್ ನಿರ್ಮಿಸಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.
Advertisement