ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜ.3ರಂದು ಬೆಂಗಳೂರಿಗೆ ಆಗಮಿಸಿ ಪಕ್ಷದ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ, ಅಂದು ಬೆಳಗ್ಗೆ 9.30 ರಿಂದ 11ವರೆಗೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಷಾ, ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಮುಂದಿನ ದಿನಗಳಲ್ಲಿ ನಡೆಸುವ ಹೋರಾಟಗಳ ಬಗ್ಗೆ ಮಾರ್ಗದರ್ಶನ ನೀಡುವರು ಎಂದು ಹೇಳಿದರು.
ಬೆಳಿಗ್ಗೆ 11ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಮಧ್ಯಾಹ್ನ 12ಕ್ಕೆ ಪಕ್ಷದ ಶಾಸಕರನ್ನು ಭೇಟಿ ಮಾಡುವರು. ಪ್ರತಿಯೊಬ್ಬ ಶಾಸಕರ ಕಾರ್ಯವೈಖರಿ ಗಮನಿಸಿ, ಸೂಕ್ತ ಸಲಹೆ ನೀಡುವರು. 3.30ರಿಂದ ಸಂಜೆ 5.30ರ ವರೆಗೆ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಹಾಗೂ ನಾನಾ ಘಟಕಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ನಂತರ ಮುಂಬೈ ಮೂಲಕ ಅಹ್ಮದಾಬಾದ್ಗೆ ಪ್ರಯಾಣಿಸುವರು.
ರಾಜ್ಯದಲ್ಲಿ ಇದುವರೆಗೆ 11.90 ಲಕ್ಷ ಸದಸ್ಯರ ನೋಂದಣಿ ಆಗಿದೆ. ರಾಜ್ಯದ ಜನಸಂಖ್ಯೆ 6ಕೋಟಿ ಇದ್ದು, ಜನಸಂಖ್ಯಾ ಆಧಾರದ ಮೇಲೆ ಪ್ರತಿ ಆರನೇ ವ್ಯಕ್ತಿಗೆ ಬಿಜೆಪಿ ಸದಸ್ಯತ್ವ ನೀಡಬೇಕೆಂಬುದು ರಾಷ್ಟ್ರೀಯ ಅಧ್ಯಕ್ ಅಮಿತ್ ಷಾ ಅವರ ಸೂಚನೆ. ಈ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಮತ್ತಷ್ಟು ಚುರುಕು ನೀಡಿ, ನಿಗದಿತ ಗುರಿ ಮುಟ್ಟಲಾಗುವುದು.
ಪ್ರತಿ 7-8 ದಿನಗಳಿದೆ 25 ಸಾವಿರ ಸದಸ್ಯರ ನೋಂದಣಿಯಾಗುತ್ತಿತ್ತು. ಇದೀಗ ಅಭಿಯಾನಕ್ಕೆ ವೇಗ ನೀಡಿದ್ದರಿಂದ ಅಂದಾಜು 80 ಸಾವಿರ ಸದಸ್ಯರ ನೋಂದಣಿ ಮಾಡಲಾಗುತ್ತಿದೆ ಎಂದರು.
Advertisement