ಬೆಂಗಳೂರು: ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಹೈಕೋರ್ಟ್ ಆದೇಶಿಸಿದೆ.
ಭೂ ಪರಿರ್ವತನೆ ಮಾಡದೇ ಬಿಡದಿಯ ಕಲ್ಲುಗೊಪನಹಳ್ಳಿ ಸರ್ವೇ ನಂ.21ರ ಬಳಿ ಕಾನೂನು ಉಲ್ಲಂಘಿಸಿ 20 ಎಕರೆ 25 ಗುಂಟೆ ಜಾಗದಲ್ಲಿ ನಿತ್ಯಾನಂದ ಆಶ್ರಮ ಸ್ಥಾಪಿಸಿದ್ದಾನೆಂದು ಖಾಸಗಿ ವ್ಯಕ್ತಿಗಳು ದೂರುದಾಖಲಿಸಿದ್ದರು. ದೂರಿಗೆ ಸಂಬಂಧಿಸಿ ತಹಶೀಲ್ದಾರ್, ಭೂ ಪರಿವರ್ತಿಸದೇ ನಿರ್ಮಿಸಿರುವ ಆಶ್ರಮವನ್ನು ಏಕೆ ತೆರವುಗೊಳಿಸಬಾರದು ಎಂದು ನೋಟಿಸ್ ಜಾರಿ ಮಾಡಿದ್ದರು.
ಇದನ್ನು ನಿತ್ಯಾನಂದ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದ. ವಿಚಾರಣೆ ನಡೆಸಿದ ನ್ಯಾ.ಬಿಎ ನಾಗರತ್ನ ಅವರ ಪೀಠ, ಆಶ್ರಮದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳದೆ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಭೂ ಪರಿವರ್ತನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು 3 ತಿಂಗಳ ಒಳಗೆ ಇತ್ಯರ್ಥ ಪಡಿಸುವಂತೆ ಕೆಎಟಿಗೆ ಸೂಚಿಸಿ ಅರ್ಜಿ ಇತ್ಯರ್ಥ ಪಡಿಸಿತು.
ನಿತ್ಯಾ ಆಶ್ರಮದಲ್ಲಿ ಗೊಲ್ಡನ್ ಟೆಂಪಲ್..!
ಈ ಹಿಂದೆ ಇದೇ ವಿವಾದಿತ ಜಾಗದಲ್ಲಿ ನಿತ್ಯಾನಂದ ಗೊಲ್ಡನ್ ಟೆಂಪಲ್ ನಿರ್ಮಿಸುವುದಾಗಿ ತನ್ನ ವೆಬ್ಸೈಟಿನಲ್ಲಿ ಹಾಕಿಕೊಂಡಿದ್ದನು. ಆಶ್ರಮದಲ್ಲಿರುವ ಬೃಹತ್ ಬನ್ನಿ ಮರದ ಆವರಣದಲ್ಲಿ ಚಿನ್ನದ ದೇವಾಲಯವನ್ನು ನಿರ್ಮಿಸುವುದಾಗಿ ನಿತ್ಯಾನಂದನ ಬೆಂಬಲಿಗರು ಹೇಳಿಕೊಂಡಿದ್ದರು. ವಿದೇಶಿ ಭಕ್ತರನ್ನು ಸೆಳೆಯಲು ಮತ್ತು ಆಶ್ರಮದ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿತ್ಯಾನಂದ ಈ ಗೊಲ್ಡನ್ ಟೆಂಪಲ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಕೆಲ ಖಾಸಗಿ ದೃಶ್ಯ ಮಾಧ್ಯಮಗಳು ಕೂಡ ನಿತ್ಯಾನಂದನ ಅಕ್ರಮ ಕಾಮಗಾರಿ ಕುರಿತು ಮಾಹಿತಿ ಪ್ರಸಾರ ಮಾಡಿದ್ದವು.
Advertisement