ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಯ 'ಎ' ಹಾಗೂ 'ಬಿ' ಶ್ರೇಣಿಯ 1998ನೇ ಸಾಲಿನ ನೇಮಕಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಪಟ್ಟಿಯನ್ನು ಅಂತಿಮಗೊಳಿಸಲು ಅನುಸರಿಸಿರುವ ಮಾನದಂಡದ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೆಪಿಎಸ್ಸಿಗೆ ಹೈಕೋರ್ಟ್ ಆದೇಶಿಸಿದೆ.
ಕೆಪಿಎಸ್ಸಿ ನೇಮಕದಲ್ಲಿ ಅಕ್ರಮ ನಡೆದಿದೆ ಎಂದು ಖಲೀಲ್ ಅಹಮದ್ ಹಾಗೂ ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ. ಬಿ ಮನೋಹರ್ ಅವರ ವಿಭಾಗೀಯ ಪೀಠ , ಕೆಪಿಎಸ್ಸಿ ಪರಿಷ್ಕೃತ ಪಟ್ಟಿ ಅಂತಿಮಗೊಳಿಸಲು ಅನುಸರಿಸಿದ ಮಾನದಂಡವೇನು ಎಂಬುದರ ಕುರಿತು ನ.22ರೊಳಗೆ ವೆಬ್ಸೈಟ್ಗೆ ಅಪ್ಲೋಡ್ ಮಾಡುವಂತೆ ಕೆಪಿಎಸ್ಸಿಗೆ ಹೈಕೋರ್ಟ್ ಆದೇಶಿಸಿದೆ.
ವಾದ ಮಂಡಿಸಿದ ವಕೀಲರು, ಕೆಪಿಎಸ್ಸಿ ತನ್ನ ವೆಬ್ಸೈಟ್ನಲ್ಲಿ ಈಗಾಗಲೇ ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿ ಪ್ರಕಟಿಸಿದೆ. ಅದನ್ನು ತಯಾರಿಸಲು ಕೆಪಿಎಸ್ಸಿ ಅನುಸರಿಸಿದ ಮಾನದಂಡವೇನು ಎಂಬುದರ ಕುರಿತು ನಮಗೆ ಮಾಹಿತಿ ಬೇಕು. ಅದರ ಆಧಾರದ ಮೇಲಷ್ಟೇ ತಾವು ತಮ್ಮ ವಾದ ಮಂಡಿಸಲು ಸಾಧ್ಯ ಎಂದು ಮನವಿ ಮಾಡಿದರು.
ವಾದ ಪರಿಗಣಿಸಿದ ವಿಭಾಗೀಯ ಪೀಠ, ಪರಿಷ್ಕೃತ ಪಟ್ಟಿ ತಯಾರಿಸಲು ಅನುಸರಿಸಿದ ಕ್ರಮಗಳು ಹಾಗೂ ಮಾನದಂಡದ ಕುರಿತು ಸಮಗ್ರ ವಿವರಗಳನ್ನೊಳಗೊಂಡ ಪ್ರಮಾಣ ಪತ್ರವನ್ನು ನ.22ರೊಳಗೆ ಕೆಪಿಎಸ್ಸಿ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಈ ಆಧಾರದ ಮೇಲೆ ನೂತನವಾಗಿ ಸೇರ್ಪಡೆಗೊಂಡಿರುವ ಪ್ರತಿವಾದಿಗಳು ನ.24 ರೊಳಗೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಅಲ್ಲದೇ ಈ ಕುರಿತು ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಕೆಪಿಎಸ್ಸಿ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.
ಪ್ರಕರಣದ ತೀರ್ಪು ವೆಬ್ಗೆ
ಪ್ರಕರಣದಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಪ್ರತಿವಾದಿಗಳಿಗೆ ನ್ಯಾಯಾಲಯದ ಹಿಂದಿನ ತೀರ್ಪುಗಳ ಕುರಿತು ಮಾಹಿತಿ ಇಲ್ಲದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಇಲ್ಲಿಯವರೆಗೆ ನೀಡಿರುವ ಎಲ್ಲ ತೀರ್ಪುಗಳನ್ನೂ ಹೈಕೋರ್ಟ್ ವೆಬ್ಸೈಟ್ಗೆ ಅಡಕ ಮಾಡುವಂತೆ ರಿಜಿಸ್ಟ್ರಾರ್ಗೆ ನ್ಯಾಯಪೀಠ ತಿಳಿಸಿದೆ.
Advertisement