ಪ್ರವಾಸೋದ್ಯಮ ಅಭಿವೃದ್ಧಿ ದೇಶದ ಅಭಿವೃದ್ಧಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜತೆ ಅಂಚೆ ಕಚೇರಿ ಹೆಚ್ಚಿನ ರೀತಿಯಲ್ಲಿ ಭಾಗಿಯಾಗಬೇಕು. ಅಲ್ಲದೆ, ಅಂಚೆ ಸಂಪರ್ಕದ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಕೇಂದ್ರ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ...
ಕೇಂದ್ರ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜತೆ ಅಂಚೆ ಕಚೇರಿ ಹೆಚ್ಚಿನ ರೀತಿಯಲ್ಲಿ ಭಾಗಿಯಾಗಬೇಕು. ಅಲ್ಲದೆ, ಅಂಚೆ ಸಂಪರ್ಕದ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಕೇಂದ್ರ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ನೂತನ ಎಟಿಎಂ ಕೇಂದ್ರ, ಪಾರ್ಸೆಲ್ ಪ್ಯಾಕಿಂಗ್ ಸೆಂಟರ್ ಉದ್ಘಾಟಿಸಿ ಹಾಗೂ `ಸುವರ್ಣ ರಥ' ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರವಾಸೋದ್ಯಮ ಬೆಳವಣಿಗೆಯಿಂದ ದೇಶ ಅಭಿವೃದ್ಧಿ ಹೊಂದುತ್ತದೆ. ಅಂಚೆ ಕಚೇರಿ ಸಿಬ್ಬಂದಿ ಸಹ ಈಗ ಮಾಡುತ್ತಿರುವ ಕೆಲಸ ಚೌಕಟ್ಟಿನಿಂದ ಹೊರಬರಬೇಕು. ಹೊಸ ನೀತಿಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿರುವ ಸುಕನ್ಯಾ ಯೋಜನೆಯಲ್ಲಿ ಅಂಚೆ ಕಚೇರಿ ಸಾಧನೆ ಅಭೂತಪೂರ್ವ. ಕೇವಲ ಎರಡೇ ತಿಂಗಳಿನಲ್ಲಿ 22 ಲಕ್ಷ ಮಂದಿ ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೋಂದಣಿಯಾದವರ ಸಂಖ್ಯೆ 18 ಲಕ್ಷ ಮಾತ್ರ. ಇದರಿಂದಲೇ ತಿಳಿಯುತ್ತದೆ ಜನರಿಗೆ ಅಂಚೆ ಇಲಾಖೆ ಮೇಲೆ ಹೆಚ್ಚಿನ ನಂಬಿಕೆ ಇದೆ ಎಂಬುದು. ಇದನ್ನು ಮತ್ತಷ್ಟು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

ಭಾರತ ಇಂದು ಅಭಿವೃದ್ಧಿ ಪಥದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಮೊಬೈಲ್, ಅಂತರ್ಜಾಲ ಹಾಗೂ ತಂತ್ರಜ್ಞಾನದ ಬಳಕೆ ಕಾರಣವಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಪರಿಕಲ್ಪನೆ ತುಂಬಾ ಉತ್ತಮವಾಗಿದೆ. ಇದು ಯಾವ ರೀತಿ ಅನುಷ್ಠಾನವಾಗಬೇಕೆಂದರೆ, ಐಟಿ-ಬಿಟಿ ಕೆಲಸಗಳ ರೀತಿ ಕಾರ್ಪೆಂಟರ್ ಕೆಲಸಕ್ಕೂ ಮೊಬೈಲ್‍ನಲ್ಲೇ ಮಾಹಿತಿ ಪಡೆದು ಅರ್ಜಿ ಸಲ್ಲಿಸುವಷ್ಟರ ಮಟ್ಟಿಗೆ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

ಅಂಚೆ ಕಚೇರಿ ಮುಖ್ಯ ಅಧಿಕಾರಿ ಎಂ.ಎಸ್. ರಾಮಾನುಮ್ ಮಾತನಾಡಿ, ಕರ್ನಾಟಕ ಅಂಚೆ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 1714 ಕಚೇರಿಗಳು ಇವೆ. ಇವುಗಳಲ್ಲಿ 58 ಮುಖ್ಯ ಕಚೇರಿಗಳೂ ಸೇರಿದಂತೆ 336 ಕಚೇರಿಗಳಲ್ಲಿ ಕೋರ್‍ಬ್ಯಾಂಕಿಂಗ್ ವ್ಯವಸ್ಥೆ ಇದೆ. ಉಳಿದೆಡೆ ಇದೇ ವರ್ಷ ಡಿ. 31ರೊಳಗೆ ಈ ಸೌಲಭ್ಯ ಒದಗಿಸುವ ಗುರಿ ಇದೆ ಎಂದರು. ಯಲಹಂಕದಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಇ-ಕಾಮರ್ಸ್ ಕೇಂದ್ರದ ಅಡಿಗಲ್ಲು ಕಾರ್ಯಕ್ರಮಕ್ಕೆ ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಸಂಸದ ಪಿ.ಸಿ. ಮೋಹನ್, ಐಎಎಸ್ ಅಧಿಕಾರಿ, ಪ್ರಭಾರ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com