ದೆಹಲಿ ನೋಡಿ ಬುದ್ಧಿಯ ಕಲಿಯಬಹುದು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಮೂರು ಹೋಳು ಮಾಡುವ ಸಿದ್ದರಾಮಯ್ಯ ಸರ್ಕಾರದ ಕ್ರಮ ರಾಜಧಾನಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಿ ಸೃಷ್ಟಿಸಿದೆ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  (ಬಿಬಿಎಂಪಿ)ಯನ್ನು ಮೂರು ಹೋಳು ಮಾಡುವ ಸಿದ್ದರಾಮಯ್ಯ ಸರ್ಕಾರದ ಕ್ರಮ ರಾಜಧಾನಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಿ ಸೃಷ್ಟಿಸಿದೆ. ಇದನ್ನು ಪಕ್ಕಕ್ಕಿಟ್ಟು ನೋಡುವವರಿಗೆ ದೆಹಲಿ ಮಹಾನಗರ ಪಾಲಿಕೆ ಹೋಳಿನ ಗೋಳು ಒಂದು ಪಾಠವಾದೀತು.

ತ್ರಿವಿಭಜನೆಯ ಬಳಿಕ ಆಗುವ ಅನುಕೂಲ, ಪ್ರತಿಕೂಲ ಪರಿಣಾಮಗಳ ಕುರಿತು ಸ್ಪಷ್ಟ ಚಿತ್ರಣ ಸಿಕ್ಕೀತು. ಬೆಂಗಳೂರಿಗೆ ಹೋಲಿಸಿದರೆ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ವಿಸ್ತಾರ ದೊಡ್ಡದು. 1.5 ಕೋಟಿ ಜನ ಸಂಖ್ಯೆಯಿರುವ ದೆಹಲಿ ದೇಶದ ರಾಜಧಾನಿ ಕೂಡ ಹೌದು. ಹಾಗಾಗಿ ಸಹಜವಾಗಿಯೇ ಇಷ್ಟೊಂದು ದೊಡ್ಡ ಪಾಲಿಕೆಯನ್ನು ಅಭಿವೃದ್ಧಿ ದೃಷ್ಟಿಯಿಂದ 3 ವಿಭಜನೆ ಮಾಡುವ ಪ್ರಸ್ತಾಪ ರಾಜಕೀಯವಾಗಿ ಆಕರ್ಷಕವಾಗಿ ಕಂಡಿತ್ತು. ಅದರಂತೆ 2012ರಲ್ಲಿ ಉತ್ತರ, ದಕ್ಷಿಣ ಹಾಗೂ ಪೂರ್ವ ಎಂದು ಪಾಲಿಕೆ ವಿಭಜನೆ ಆಯ್ತು.

ದಿವಾಳಿಯ ಹಂತ

ದೆಹಲಿ ಪಾಲಿಕೆ ಮೂರು ಹೋಳಾಗಿ ಇನ್ನೂ ಸರಿಯಾಗಿ ಮೂರು ವರ್ಷವೂ ಆಗಿಲ್ಲ. ಅಷ್ಟರಲ್ಲೇ ಉತ್ತರ ಮತ್ತು ಪೂರ್ವ ಪಾಲಿಕೆಗಳು ದಿವಾಳಿ ಪರಿಸ್ಥಿತಿಗೆ ತಲುಪಿವೆ. 2015ರಿಂದ ನೌಕರರ ವೇತನ ಪಾವತಿಸಲೂ ಆಗದ ಸ್ಥಿತಿಗೆ ಈ ಎರಡು ಪಾಲಿಕೆಗಳು ಬಂದು ನಿಂತಿವೆ. ಒಂದಾಗೋಣ ಬಾರಾ: ದಿನಕ್ಕೊಂದರಂತೆ ಸೃಷ್ಟಿಯಾಗುತ್ತಿರುವ ಹೊಸ ಸಮಸ್ಯೆಯಿಂದ ಬೇಸತ್ತು ಕಳೆದ ತಿಂಗಳು ಈ ಹೋಳಿನ ಗೋಳೇ ಬೇಡ ಮತ್ತೆ ಒಂದಾಗೋಣ ಎನ್ನುವ ಪ್ರಸ್ತಾಪವನ್ನು ಪಾಲಿಕೆಗಳು ಸರ್ಕಾರದ ಮುಂದಿಟ್ಟಿವೆ.

ದೆಹಲಿ ವ್ಯಥೆಯೇ
ದೆಹಲಿಯಲ್ಲಿ ಜನರ ದಾಖಲೆಗಳು ಹಾಗೂ ವಿಭಜನೆಯ ಮೊದಲು ಕೈಗೆತ್ತಿಕೊಳ್ಳಲಾದ ಯೋಜನೆಗಳ ಕಡತಗಳನ್ನು ಹಂಚಿಕೆ ಮಾಡುವುದೇ ನಿಜವಾದ ಸವಾಲಾಗಿತ್ತು. ಇ-ಆಡಳಿತಕ್ಕೆ ಸಂಬಂಧಿಸಿದ ಕೇಂದ್ರೀಯ ಸರ್ವರ್ ಅನ್ನು ವಿಕೇಂದ್ರೀಕರಣ ಮಾಡಬೇಕಿತ್ತು. ಆದರೆ, ಈ ಕೆಲಸಕ್ಕೆ ಕೈಹಾಕಿದಾದ ಸರ್ವರ್ ಕ್ರ್ಯಾಶ್ ಆಯ್ತು. ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸ್ತಾ ಇಲ್ಲ, ನಿಮ್ಮ ಕೆಲಸ ಈಗ ಆಗಲ್ಲ ಎಂದು ಸಾರ್ವಜನಿಕರಿಗೆ ಸಮಜಾಯಿಶಿ ನೀಡಿ ಅಧಿಕಾರಿಗಳಿಗೂ ಸಾಕು ಸಾಕಾಗಿ ಬಿಟ್ಟಿತ್ತು.

ಹೀಗಿದೆ ದೇಶದ ರಾಜಧಾನಿಯ ಹೋಳಿನ ಗೋಳು

  • ಪಾಲಿಕೆ ವಿಭಜನೆಯಾದರೆ ಆಸ್ತಿ (ಆಸ್ತಿ, ಪಾಸ್ತಿ ಹಾಗೂ ತೆರಿಗೆಯ ವ್ಯಾಪ್ತಿ)ಯೂ ವಿಭಜನೆಯಾಗಬೇಕಲ್ಲವೆ? ದೆಹಲಿ ಪಾಲಿಕೆ ಮೂರು ವಿಭಜನೆಯಾದಾಗ ಆಸ್ತಿಯ ಅಸಮಾನ ಹಂಚಿಕೆಯಾಯ್ತು. ಇದರ ಪರಿಣಾಮ ದಕ್ಷಿಣ ದೆಹಲಿ ಪಾಲಿಕೆ ವ್ಯಾಪ್ತಿಗೆ ಹೆಚ್ಚಿನ ಆದಾಯ ಬರುವ ಎ- ಕೆಟಗರಿ ಆಸ್ತಿಗಳು ಬಂದವು. ದಕ್ಷಿಣ ದೆಹಲಿ ಪಾಲಿಕೆ ಶ್ರೀಮಂತವಾಯ್ತು. ಇನ್ನೊಂದು ಕಡೆ ಉತ್ತರ ಮತ್ತು ಪೂರ್ವ ದೆಹಲಿ ಕಾರ್ಪೊರೇಷನ್‍ಗಳು ಆದಾಯ ಸೃಷ್ಟಿಸಲು ಪರದಾಡಬೇಕಾಯ್ತು. ಹಣಕ್ಕಾಗಿ ಈ ಎರಡು ಪಾಲಿಕೆಗಳು ರಾಜ್ಯ ಸರ್ಕಾರದ ಮುಂದೆ ಭಿಕ್ಷಾ ಪಾತ್ರೆ ಹಿಡಿದು ನಿಲ್ಲಬೇಕಾಯಿತು.
  • ದೊಡ್ಡ ಯೋಜನೆಗಳು ಬಿಡಿ, ಸಣ್ಣ ಯೋಜನೆಗಳ ಅನುಷ್ಠಾನವೂ ವಿಳಂಬವಾಯ್ತು. ಒಂದೇ ಪಾಲಿಕೆ ಇದ್ದಾಗ ಗುಂಡಿ ಮುಚ್ಚಲು ಎರಡು ವಿಶೇಷ ಯಂತ್ರಗಳಿದ್ದವು. ಇನ್ನು ಡ್ರೈನೇಜ್ ಸಮಸ್ಯೆ ಪರಿಹರಿಸುವ ಎರಡು ಯಂತ್ರಗಳಿದ್ದವು. ವಿಭಜನೆ ಬಳಿಕ ಈ ಯಂತ್ರಗಳನ್ನು ಹಂಚಿಕೊಳ್ಳಬೇಕಾಯ್ತು. ಹೀಗಾಗಿ ಯಂತ್ರಗಳಿಗಾಗಿ ಒಂದು ಪಾಲಿಕೆ ಇನ್ನೊಂದನ್ನು ಅವಲಂಬಿಸಬೇಕಾಗಿತ್ತು. ಇದರ ಒಟ್ಟಾರೆ ಪರಿಣಾಮ ಡ್ರೈನೇಜ್ ಸಮಸ್ಯೆ ಪರಿಹರಿಸಲು ಒದ್ದಾಡಬೇಕಾಯ್ತು. ರಸ್ತೆ ಗುಂಡಿ ಮುಚ್ಚುವುದು ದೊಡ್ಡ ತಲೆನೋವಾಯ್ತು.
  • ಹಾಗೆ ನೋಡಿದರೆ ದೆಹಲಿ ಕಾರ್ಪೊರೇಷನ್ ವಿಭಜಿಸುವ ನಿರ್ಧಾರ ರಾಜಕೀಯವಾಗಿ ತೆಗೆದುಕೊಂಡದ್ದು. ಸಿಡಬ್ಲ್ಯು ಹಗರಣದ ಆರೋಪ ಕೇಳಿ ಬರುತ್ತಿದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ದೆಹಲಿ ಕಾರ್ಪೊರೇಷನ್ ಅನ್ನು ವಿಭಜಿಸುವ ನಿರ್ಧಾರ ಕೈಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಕೂಡ ಅದೇ ನಡೆ ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೂ ಪಾಲಿಕೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲುವ ಭೀತಿ ಆವರಿಸಿರುವಂತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com