ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ' ಮನ್ ಕಿ ಬಾತ್' ಭಾಷಣಗಳು ಸುಳ್ಳಿನ ಕಂತೆ ಎಂದು ನಿಂದಿಸಿರುವ ಕೇಂದ್ರ ದ ಮಾಜಿ ಸಚಿವ ಜೈರಾಂ ರಮೇಶ್, ಕೇಂದ್ರ ಸರ್ಕಾರದ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪ್ತಿ ಜನಾಂದೋಲನ ನಡೆಸಲಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿರುವ ಅವರು, ಕರ್ನಾಟಕದಲ್ಲಿ ರೈತ ವಿರೋಧಿ ನರೇಂದ್ರ ಮೋದಿ ಎಂಬ ಘೋಷವಾಕ್ಯದೊಂದಿಗೆ ಹೋರಾಟ ನಡೆಸಲಾಗುವುದು. ಇದಕ್ಕೆ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ಹೇಳಿದರು. ಯುಪಿಎ ಸರ್ಕಾರ 2013 ರಲ್ಲಿ ಜಾರಿಗೆ ತಂದ ಭೂಸ್ವಾಧೀನ ವಿಧೇಯಕ ರೈತ ಪರವಾಗಿತ್ತು.
ಲೋಕಸಭೆಯ ಈಗಿನ ಸ್ಪೀಕರ್ ಸುಮಿತ್ರಾ ಮಹಾಜನ್ ಅಧ್ಯಕ್ಷತೆಯ ಸಂಸದೀಯ ಸ್ಥಾಯಿ ಸಮಿತಿ ಈ ವಿಧೇಯಕದ ಪರವಾಗಿತ್ತು. ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿ ತಲಾ 8 ಗಂಟೆ ಮಾತನಾಡಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಕೆಲವೇ ತಿಂಗಳಲ್ಲಿ ತಿದ್ದುಪಡಿ ಮಾಡಿದ್ದಾರೆ. ಇದು ರೈತ ವಿರೋಧಿ ಎಂದು ಹೇಳಿದರು. ಕರ್ನಾಟಕದಲ್ಲಿ ಆರಂಭಿಸುವ ಹೋರಾಟ ನಮಗೆ ಸಂಜೀವಿನಿ. ಕೇಂದ್ರ ಸರ್ಕಾರದ ವಿರುದ್ಧ ನಾವು ವ್ಯವಸ್ಥಿತ ಹೋರಾಟ ರೂಪಿಸುತ್ತೇವೆ. ರಾಜಕೀಯದಲ್ಲಿ ಇರುವ ಯಾವುದೇ ಪಕ್ಷ ಸನ್ಯಾಸಿಗಳ ಸಂಘಟನೆಯಲ್ಲ. ನಮಗೆಲ್ಲರಿಗೂ ಅಧಿಕಾರಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Advertisement