ಬೆಂಗಳೂರು: ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದವನನ್ನು ಬಂಧಿಸಿರುವ ಎಚ್ಎಎಲ್ ಪೊಲೀಸರು ರು.7 ಲಕ್ಷ ಮೌಲ್ಯದ 230 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಒಡಿಶಾದ ಭುವನೇಶ್ವರ ಮೂಲದ ಅಜಯ್ ಕುಮಾರ್(40) ಬಂಧಿತ. ಮಾರತ್ತಹಳ್ಳಿ ನಾಗಾರ್ಜುನ ಸೆರೆನ್ ಅಪಾರ್ಟ್ಮೆಂಟ್ವೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಮನೆಯಲ್ಲಿ ಹಲವು ವರ್ಷಗಳಿಂದ ಅಜಯ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಬಚ್ಚಿಟ್ಟಿದ್ದ. ಐದಾರು ದಿನಗಳ ಬಳಿಕ ಚಿನ್ನಾಭರಣ ಕಳವಾಗಿರುವುದು ತಿಳಿದ ಮನೆ ಮಾಲೀಕರು ಎಚ್ಎಎಲ್ ಪೊಲೀಸ್ ಠಾಣೆಗೆ ತೆರಳಿ ಏ.22ರಂದು ದೂರು ನೀಡಿದ್ದರು.
ದೂರು ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಅಜಯ್ ಚಿನ್ನಾಭರಣ ಸಮೇತ ತನ್ನ ಊರಿಗೆ ಪರಾರಿಯಾಗಲು ಕೆ.ಆರ್.ಪುರ ರೈಲು ನಿಲ್ದಾಣಕ್ಕೆ ತೆರಳಿದ್ದ. ಮಾಹಿತಿ ಸಂಗ್ರಹಿಸಿದ ಪೊಲೀಸರು, ರೈಲು ನಿಲ್ದಾಣದಲ್ಲೇ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಸ್ವಂತ ಕಾರು ಖರೀದಿಗೆ ಕಳವು: ಸ್ವಂತ ಕಾರು ಖರೀದಿಸಿ, ಬಿಸಿನೆಸ್ ಆರಂಭಿಸಲು ಆರೋಪಿ ತನ್ನ ಮಾಲೀಕರ ಬಳಿ ಹಲವು ದಿನಗಳಿಂದ ಹಣ ಕೇಳುತ್ತಿದ್ದ. ಆದರೆ, ಮಾಲೀಕರು ನಿರಾಕರಿಸಿದ್ದರಿಂದ ಹೊಸ ಕಾರು ಖರೀದಿ ಮಾಡಲೇಬೇಕು ಎಂದು ತೀರ್ಮಾನಿಸಿದ ಚಿನ್ನಾಭರಣ ಕದ್ದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
Advertisement