ಭಾರತೀಯ ವಿದ್ಯಾಭವನದಲ್ಲಿ ಸಂಸ್ಕೃತ ಸಂಗೀತ ಯಾನ ಅಭಿಯಾನಕ್ಕೆ ಚಾಲನೆ: ಸಾಮರಸ್ಯಂ ಸಿ.ಡಿ ಬಿಡುಗಡೆ
ಬೆಂಗಳೂರು: ಸಂಸ್ಕೃತದಲ್ಲೇ ಸಂಭಾಷಣೆ ನಡೆಸುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈತ್ರಿ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನ ಸಂಸ್ಕೃತ ಸಂಗೀತ ಯಾನ ಅಭಿಯಾನಕ್ಕೆ ಚಾಲನೆ ನೀಡಿದೆ.
ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಂಗೀತದ ಮೂಲಕ ಸಂಸ್ಕೃತವನ್ನು ಜನಪ್ರಿಯಗೊಳಿಸಲು ಆ ಮೂಲಕ ಸಂಸ್ಕೃತ ಸಂಭಾಷಣೆಗೆ ಪ್ರೇರಣೆ ನಿಡುವುದು ಅಭಿಯಾನದ ಉದ್ದೇಶವಾಗಿದೆ.
ಸಂಗೀತ ಯಾನ ಅಭಿಯಾನ ಕಾರ್ಯಕ್ರಮದಲ್ಲಿ ಸಂಸ್ಕೃತ ಗೀತೆಗಳ ಸಾಮರಸ್ಯಂ ಸಿ.ಡಿಯನ್ನು ಬಿಡುಗಡೆಗೊಳಿಸಲಾಯಿತು. ಕಿರು ಚಿತ್ರಗಳು, ಗಾಯನ, ಶ್ಯಾಡೋಪ್ಲೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಬ್ರಿಟನ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬ್ರಿಟೀಶ್ ಮಕ್ಕಳು ಪಠಿಸಿದ ವೇದ ಮಂತ್ರದ ಪಠಣದ ವಿಡಿಯೋ ಕ್ಲಿಪಿಂಗ್, ಭಾರತೀಯ ಮೂಲದ ಅಮೆರಿಕಾದಲ್ಲಿರುವ ಮಕ್ಕಳು ಬೆಂಗಳೂರಿನ ಅಕ್ಷರಂ ಗೆ ಬಂದು ಸ್ತೋತ್ರವೊಂದನ್ನು ರ್ಯಾಪ್ ಗೆ ಅಳವಡಿಸಿದ್ದ ಕಿರು ಆಲ್ಬಂ ನನ್ನು ಪ್ರದರ್ಶಿಸಲಾಯಿತು.
ಸರಳ ಸಂಸ್ಕೃತದ ಸಂಭಾಷಣೆಯ ಪ್ರಚಾರಕ್ಕಾಗಿ ಶ್ರಮಿಸುತ್ತಿರುವ ಡಾ. ಗಣಪತಿ ಹೆಗಡೆ ನೇತೃತ್ವದಲ್ಲಿ ಮೈತ್ರಿ- ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನ ಕಾರ್ಯನಿರ್ವಹಿಸುತ್ತಿದೆ. ಸಂಭಾಷಣಾ ಸಂಸ್ಕೃತದ ಬಗ್ಗೆ ಶಾಲಾ-ಕಾಲೇಜು, ಕಚೇರಿಗಳಲ್ಲೂ ಮೈತ್ರಿ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನ ಜಾಗೃತಿ ಮೂಡಿಸುತ್ತಿದೆ. ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೊಳದ ಮಠದ ಶ್ರೀ ಶಾಂತವೀರಸ್ವಾಮಿಜಿ, ಡಾ.ಮಲ್ಲೇಪುರಂ ವೆಂಕಟೇಶ ಮತ್ತಿತರಿದ್ದರು.