ಮಾಜಿ ಸಚಿವ ಬೆಂಕಿ ಮಹಾದೇವ ವಿಧಿವಶ: ನಾಳೆ ನಂಜನಗೂಡಿನಲ್ಲಿ ಅಂತ್ಯಕ್ರಿಯೆ
ಮೈಸೂರು: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಬೆಂಕಿ ಮಹಾದೇವ ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 74 ವರ್ಷದ ಮಹಾದೇವ ಎಸ್.ಎಂ.ಕೃಷ್ಣ ಅವಧಿಯಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದ ಬೆಂಕಿ ಮಹಾದೇವ ಮೈಸೂರು ಪ್ರಾಂತ್ಯದಲ್ಲಿ ಬೆಂಕಿ ಮಹಾದೇವ ಎಂದೇ ಹೆಸರಾಗಿದ್ದರು. ಸುಮಾರು ಮೂರು ದಶಕಗಳ ಕಾಲ ಕಾಂಗ್ರೆಸ್ ನಲ್ಲಿದ್ದರು.
ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ನಂಜನಗೂಡು ಮೂಲದ ಮಹಾದೇವು ಅವರ ಆರೋಗ್ಯ ಕಳೆದ ಕೆಲ ದಿನಗಳಿಂದ ಏರುಪೇರಾಗಿತ್ತು. ಪಾರ್ಶುವಾಯುಪೀಡಿತರಾಗಿ ಮಹಾದೇವು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವಾದ ಕಾರಣ ಮಹಾದೇವು ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮಹಾದೇವು ವಿಧಿವಶರಾಗಿದ್ದಾರೆ. ನಾಳೆ ಹುಟ್ಟೂರು ನಂಜನಗೂಡಿನಲ್ಲಿ ಬೆಂಕಿ ಮಹಾದೇವು ಅವರ ಅಂತ್ಯಕ್ರಿಯೆ ನಡೆಯಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ ನಂತರ ಸಕ್ರಿಯ ರಾಜಕಾರಣದಿಂದ ಮಹಾದೇವು ಬಹುತೇಕ ದೂರವೇ ಉಳಿದಿದ್ದರು. ಆಗಾಗ್ಗೆ ನಂಜನಗೂಡು ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ ಎಂದು ಪತ್ರಿಕಾಗೋಷ್ಠಿಗಳ ಮೂಲಕ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ತೀರ ಇತ್ತೀಚೆಗೆ ಆರೋಗ್ಯ ಸಮಸ್ಯೆ ಉಲ್ಭಣಿಸಿದ ಕಾರಣ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ