ಬೆಂಗಳೂರು: ಕೈಗಾರಿಕೆ ಉದ್ದೇಶಕ್ಕೆ ಪಡೆದಿದ್ದ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿದ ಪ್ರಕರಣದಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಕೆಐಎಡಿಬಿ, ಬಿಡಿಎ ಮತ್ತು ಕೆಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್. ಆರ್. ಹಿರೇಮಠ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಕೆಐಎಡಿಬಿಯಿಂದ ಜಾಯ್ ಐಸ್ ಕ್ರೀಂ ಕಂಪೆನಿ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿತ್ತು. ಆದರೆ ಅದನ್ನು ಅಕ್ರಮವಾಗಿ ವೈಲ್ಡ್ ಫ್ಲವರ್ ಎಸ್ಟೇಟ್ ಆ್ಯಂಡ್ ರೆಸಾರ್ಟ್ ಹೆಸರಿನ ಮೂಲಕ ಪರಭಾರೆ ಮಾಡಲಾಗಿದೆ. ಈ ಕಂಪನಿ್ಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಪಾಲುದಾರರಾಗಿದ್ದಾರೆ. ಕೆಐಎಡಿಬಿಗೆ ಜಮೀನನ್ನು ಗುತ್ತಿಗೆ ನೀಡುವ ಅಧಿಕಾರ ಮಾತ್ರ ಇದೆ. ಆದರೆ ಅದನ್ನು ಉಲ್ಲಂಘಿಸಿ ಭೂಮಿಯನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ಸಂಪೂರ್ಣ ಅಕ್ರಮ ನಡೆಸಲಾಗಿತ್ತು ಎಂದು ದೂರಿದರು.
ನ್ಯಾ.ಮಂಜುನಾಥ್ಗೆ ಉಪಲೋಕಾ ಯುಕ್ತ ಪಟ್ಟ ಬೇಡ: ಹೈಕೋರ್ಟ್ ನಿವೃತ್ತ ನ್ಯಾ.ಕೆ.ಎಲ್.ಮಂಜುನಾಥ್ ಅವರನ್ನು ಉಪಲೋಕಾಯುಕ್ತ ಹುದ್ದೆಗೆ ಪರಿಗಣಿಸಬಾರದು ಎಂದು ಎಸ್.ಆರ್. ಹಿರೇಮಠ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳಾಗಿದ್ದ ನ್ಯಾ. ಪಿ.ಡಿ. ದಿನಕರನ್ ನಂತರದ ಭ್ರಷ್ಟ ನ್ಯಾಯಮೂರ್ತಿ ಎಂದರೆ ಕೆ.ಎಲ್. ಮಂಜುನಾಥ್. ಅಂಥವರ ಹೆಸರನ್ನೇ ರಾಜ್ಯ ಸರ್ಕಾರ 2ನೇ ಬಾರಿಗೆ ಶಿಫಾರಸು ಮಾಡಿ ಕಳುಹಿಸಿದೆ, ಇದು ಸರಿಯಲ್ಲ. ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳಬೇಕು ಎಂದರು.
ಶಕ್ತಿ ಪ್ರಮೋಟರ್ಸ್ ಮತ್ತು ಡೆವಲಪರ್ಸ್ನಿಂದ ಕೆ.ಎಲ್. ಮಂಜುನಾಥ್ ಪುತ್ರಿ ಚೈತ್ರಾ ಹೆಸರಿನಲ್ಲಿ ನಿವೇಶನವಿದ್ದರೂ ಕೂಡ ವೈಯಾಲಿಕಾವಲ್ ಗೃಹ ನಿರ್ಮಾಣ ಸಂಸ್ಥೆಯಿಂದ ಮತ್ತೆ ನಿವೇಶನವನ್ನು ಪಡೆದುಕೊಳ್ಳಲಾಗಿದೆ, ಇದು ಅಕ್ರಮ ಖರೀದಿ. ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಸಹಕಾರದ ಮೂಲಕ ಈ ಅಕ್ರಮ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಹಿರೇಮಠ್ ಆರೋಪಿಸಿದರು.
Advertisement