ಮಂಗಳೂರು : ಮಂಗಳೂರಿನ ಹಳೆ ಬಂದರಿನಲ್ಲಿ ಲಕ್ಷದ್ವೀಪದ ಪ್ರಯಾಣಿಕ ಮತ್ತು ಸರಕು ಹಡಗು ನಿಲುಗಡೆಗೆ 60 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲು ಲಕ್ಷ ದ್ವೀಪದ ಕೇಂದ್ರಾಡಳಿತ ಪ್ರದೇಶ ಕರ್ನಾಟಕ ಸರ್ಕಾರದೊಂದಿಗೆ ಬುಧವಾರ ಒಡಂಬಡಿಕೆ ಮಾಡಿಕೊಂಡಿದೆ.
ಬಂದರು ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಉಪಸ್ಥಿತಿಯಲ್ಲಿ ಕರ್ನಾಟಕ ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಆರ್.ಮೋಹನ್ ಮತ್ತು ಲಕ್ಷದ್ವೀಪ ಬಂದರು ಇಲಾಖಾ ನಿರ್ದೇಶಕ ಕರನ್ಜಿತ್ ಸಹಿ ಹಾಕಿ ದಾಖಲೆ ಪತ್ರಗಳನ್ನು ಹಸ್ತಾಂತರಿಸಿಕೊಂಡರು.
ಈ ಸಂದರ್ಭ ಮಾತನಾಡಿದ ಸಚಿವ ಚಿಂಚನಸೂರ್, ಲಕ್ಷದ್ವೀಪಕ್ಕೆ ಸರಕು ಸಾಗಿಸಲು ಅನುಕೂಲವಾಗುವಂತೆ ಪ್ರತ್ಯೇಕ ಜೆಟ್ಟಿ ನಿರ್ಮಿಸಬೇಕು ಎಂಬ 30 ವರ್ಷದ ಬೇಡಿಕೆ ಈಡೇರಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೆಟ್ಟಿ ನಿರ್ಮಾಣಕ್ಕೆ ಸರ್ಕಾರ ಎಲ್ಲ ನೆರವು ನೀಡಲಿದೆ. ತಕ್ಷಣ ಕಾಮಗಾರಿ ಆರಂಭಿಸಬೇಕು. ಜೆಟ್ಟಿ ನಿರ್ಮಾಣದ ಸಂದರ್ಭ 7 ಮೀ. ಆಳದವರೆಗೆ ಹೂಳೆತ್ತಲಾಗುವುದು. ಡ್ರೆಜ್ಜಿಂಗ್ ಕೆಲಸ ಜೆಟ್ಟಿ ನಿರ್ಮಾಣದ ಭಾಗವೇ ಆಗಿದೆ ಎಂದರು.
ಲಕ್ಷದ್ವೀಪದ ಪ್ರಯಾಣಿಕ ಮತ್ತು ಸರಕು ಹಡಗು ನಿಲುಗಡೆಗೆ 60 ಕೋಟಿ ರೂ. ವೆಚ್ಚದಲ್ಲಿ ಹಳೆ ಬಂದರಿನಲ್ಲಿ 300 ಮೀಟರ್ ಉದ್ದ ಡೆಡಿಕೇಟೆಡ್ ಜೆಟ್ಟಿ ನಿರ್ಮಾಣ. ಜೆಟ್ಟಿಯ ಮುಂಭಾಗದಿಂದ 7 ಮೀಟರ್ ಆಳಕ್ಕೆ ಹೂಳೆತ್ತುವುದು, ಸರಕು ಸಂಗ್ರಹಣೆಗಾಗಿ ಗೋದಾಮು ರಚನೆ, ಪ್ರಯಾಣಿಕರ ತಂಗುದಾಣ ಕಟ್ಟಡ ರಚನೆ, ಚರಂಡಿ ನಿರ್ಮಾಣ ಹಾಗೂ ಇತರ ಸೌಲಭ್ಯಗಳು ಈ ಯೋಜನೆಯಲ್ಲಿ ಒಳಗೊಂಡಿದೆ.
ಬಂದರು ಇಲಾಖೆ ಸ್ಥಳ ನೀಡಲಿದ್ದು, ರಾಜ್ಯದ ಪಿಡಬ್ಲ್ಯುಡಿಯಡಿ ಇಲಾಖೆ ಯೋಜನೆ ರೂಪಿಸಲಿದೆ. ಕಟ್ಟಡ, ಗೋದಾಮು, ಹೂಳೆತ್ತುವಿಕೆ ಇತ್ಯಾದಿಗಳ ಒಟ್ಟು 60 ಕೋಟಿ ರೂ. ಮೊತ್ತವನ್ನು ಲಕ್ಷದ್ವೀಪ ಸರಕಾರ ಭರಿಸಲಿದೆ ಕೇಂದ್ರ ಸರ್ಕಾರದ ಅನುಮತಿ ಪಡೆಯಲು 6 ತಿಂಗಳ ಅವಕಾಶ ಅಗತ್ಯವಿದೆ ಎಂದು ಲಕ್ಷದ್ವೀಪದ ಆಡಳಿತಾದಿsಕಾರಿ ರಾಜೇಶ್ ಪ್ರಸಾದ್ ಹೇಳಿದರು.
Advertisement