ಸಲ್ಲೇಖನ ವ್ರತ ನಿಷೇಧ ತೀರ್ಪು ಖಂಡಿಸಿ ಜೈನರ ಪ್ರತಿಭಟನೆ
ಬೆಂಗಳೂರು: ಸಲ್ಲೇಖನ ವ್ರತಕ್ಕೆ ನಿಷೇಧ ಹೇರಿರುವ ರಾಜಸ್ಥಾನ ಹೈಕೋರ್ಟ್ ತೀರ್ಪು ವಿರೋಧಿಸಿ ಸಾವಿರಾರು ಜೈನ ಧರ್ಮಿಯರು ಗುರುವಾರ ಮೌನ ಪ್ರತಿಭಟನೆ ನಡೆಸಿದರು.
ಚಿಕ್ಕಪೇಟೆಯ ಆದಿನಾಥ ಮಂದಿರದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಮೌನ ಮೆರವಣಿಗೆ ನಡೆಸಿದ ನಂತರ ಬಹಿರಂಗ ಸಭೆ ನಡೆಸಿದರು. ಬಳಿಕ ಪ್ರತಿಭಟನೆ ಸಂಯೋಜಕ ಸಜ್ಜನ್ ರಾಜ್ ಮೆಹ್ತಾ ನೇತೃತ್ವದಲ್ಲಿ ಧಾರ್ಮಿಕ ಮುಖಂಡರು ರಾಜಪಾಲರನ್ನು ಭೇಟಿ ಮಾಡಿ ಹೈಕೋರ್ಟ್ ನೀಡಿರುವ ತೀರ್ಪು ವಾಪಸ್ ಪಡೆಯುವಂತೆ ಒತ್ತಡ ಹೇರಲು ಮನವಿ ಸಲ್ಲಿಸಿದರು.
ಜೈನ ಧರ್ಮದ ಆಚರಣೆಯ ಪ್ರಮುಖ ಅಂಗವಾದ ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಾನ. ಇದರ ಆಚರಣೆ ಭಾರತೀಯ ದಂಡ ಸಂಹಿತೆ 306 (ಆತ್ಮಹತ್ಯೆಗೆ ಪ್ರೇರಣೆ) ಮತ್ತು 309ರ(ಆತ್ಮಹತ್ಯೆಗೆ ಯತ್ನ) ಅನುಸಾರ ಶಿಕ್ಷಾರ್ಹ ಎಂದು ಹೈಕೋರ್ಟ್ ನೀಡಿರುವ ತೀರ್ಪಿನಿಂದ ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸಜ್ಜನ್ ರಾಜ್ ಮೆಹ್ತಾ ಹೇಳಿದರು.
ಸಾವಿರಾರು ವರ್ಷಗಳಿಂದ ಜೈನ ಧರ್ಮಿಯರು ಸಲ್ಲೇಖನ ವ್ರತ ಆಚರಿಸಿಕೊಂಡು ಬರುತ್ತಿದ್ದಾರೆ. ಧರ್ಮದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವವರು ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವರು ಮಾತ್ರ ಈ ವ್ರತ ಕೈಗೊಳ್ಳುತ್ತಾರೆ. ಈ ವ್ರತ ಕೈಗೊಳ್ಳುವ ಮೊದಲು ಕುಟುಂಬ ಸದಸ್ಯರು, ಸಂಬಂಧಿಕರ ಮತ್ತು ಧಾರ್ಮಿಕ ಮುಖಂಡರ ಅನುಮತಿ ಪಡೆಯಬೇಕಾಗಿದೆ ಇದರಿಂದ ಯಾರಿಗೂ ನೋವು ಉಂಟಾಗುವುದಿಲ್ಲ ಎಂದು ಮೆಹ್ತಾ ಹೇಳಿದರು.
ಕಾಯಿಲೆಯಿಂದ ಬಳಲುತ್ತಿರುವ, ವೃದ್ಧಾಪ್ಯ ತಲುಪಿ ಸಾವಿನಂಚಿನಲ್ಲಿರುವ, ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಆಹಾರ ಸೇವಿಸದೆ ಉಪವಾಸ ಮಾಡಿ ದೇಹ ತ್ಯಾಗ ಮಾಡುವ ಪ್ರಕ್ರಿಯೆಯಲ್ಲೇ ಸಲ್ಲೇಖನ ವ್ರತ. ಇದೊಂದು ಧಾರ್ಮಿಕ ಆಚರಣೆಯೇ ಹೊರತು ಬರೀ ಜೀವ ಬಿಡಲು ಮಾಡುವ ಉಪವಾಸವಲ್ಲ. ಮೋಕ್ಷ ಹೊಂದಲು ಮತ್ತು ಆತ್ಮವನ್ನು ಪವಿತ್ರಗೊಳಿಸಲು ನಡೆಯುವ ಅಂತಿಮ ತಪಸ್ಸು. ಹಾಗಾಗಿ ಧಾರ್ಮಿಕ ವಿಚಾರಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸರಿಯಲ್ಲ. ವ್ರತದ ಕುರಿತು ನೀಡಿರುವ ತೀರ್ಪು ವಾಪಸ್ ಪಡೆಯಲು ಒತ್ತಡ ಹೇರಬೇಕೆಂದು ರಾಜ್ಯಪಾಲರ ಮೂಲಕ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ