

ಬೆಂಗಳೂರು: ಬೆಸ್ಕಾಂನಲ್ಲಿ ವ್ಯಾಮ್ಸ್ ಸಾಫ್ಟ್ ವೇರ್ ಅಳವಡಿಕೆಯಿಂದ ತಾತ್ಕಾಲಿಕ ಮತ್ತು ಹೊಸ ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸಲು ಅನಗತ್ಯ ವಿಳಂಬವಾಗುತ್ತಿದೆ. ಗ್ರಾಹಕರು
ಮತ್ತು ಗುತ್ತಿಗೆದಾರರು ಪರದಾಡುತ್ತಿದ್ದು, ಕೂಡಲೇ ಸಮಸ್ಯೆ ಸರಿ ಪಡಿಸಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬೆಸ್ಕಾಂ ನಿರ್ದೇಶಕ ಪಂಕಜಕುಮಾರ್ ಪಾಂಡೆ ಅವರಿಗೆ ಬುಧವಾರ ಮನವಿ ಮಾಡಿದರು.
ಬೆಸ್ಕಾಂ ಕೇಂದ್ರ ಕಚೇರಿ ಎದುರು ಸಂಘದ ಸದಸ್ಯರು ಪ್ರತಿಭಟನೆಗೆ ಮುಂದಾದಾಗ ಬೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನಿಡಿದರು. ಕೆಇಸಿಆರ್ಸಿ ನಿಯಮ ಪ್ರಕಾರ ಅನಧಿಕೃತ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶ ಮಾಡಿಕೊಡಬೇಕು. ಕುಡಿಯುವ ನೀರಿನ ವಿದ್ಯುದ್ದೀಕರಣದ ಮೂಲ ಸೌಕರ್ಯ ಕಾಮಗಾರಿಗಳಿಗೆ ರಾಜ್ಯದ ಸಂಚಿತ ನಿಧಿಯಿಂದ ಅನುದಾನ ಸ್ವೀಕರಿಸುವ ಪದ್ಧತಿ ಜಾರಿಗೆ ತರಬೇಕು. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ನವೀಕರಣ ಸಂದರ್ಭದಲ್ಲಿ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಾರೆ.
ಅಧಿಕಾರಿಗಳು ಹಲವು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿದ್ದರಿಂದ ಭ್ರಷ್ಟಾಚಾರ ಹೆಚ್ಚುತ್ತಿದೆ. ಒಂದೇ ಕಡೆ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಡಿ.4ರಂದು ಸಂಜೆ 5 ಗಂಟೆಗೆ ಗುತ್ತಿಗೆ ದಾರರ ಜೊತೆಗೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಬಗೆಹರಿಸುತ್ತೇನೆ ಎಂದು ಪಂಕಜಕುಮಾರ್ ಭರವಸೆ ನೀಡಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ರುದ್ರೇಶ್ ಹೇಳಿದರು. ಜಿಲ್ಲಾ ಅಧ್ಯಕ್ಷ ಜಿ.ರಾಮು, ಜಿಲ್ಲಾ ಉಪಾಧ್ಯಕ್ಷರಾದ ಗಂಗಾಧರಯ್ಯ, ಸಂಘದ ಪದಾಧಿಕಾರಿಗಳು ಇದ್ದರು.
Advertisement