ಬೆಂಗಳೂರು: ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭಕ್ಕೆ ಇಂತಿಷ್ಟೇ ವಿಸ್ತೀರ್ಣದ ಆಟದ ಮೈದಾನವಿರಬೇಕು ಎಂದು ಶಿಕ್ಷಣ ಇಲಾಖೆ ವಿಧಿಸಿದ್ದ ಷರತ್ತನ್ನು ಹೈಕೋರ್ಟ್
ಸಡಿಲಗೊಳಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳು ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. ಖಾಸಗಿ ಶಾಲೆಯ ಬಳಿಯೇ ಆಟದ ಮೈದಾನವನ್ನು ಕಲ್ಪಿಸುವುದಕ್ಕೆ ಬೆಂಗಳೂರು ನಗರದಲ್ಲಿ ಕಷ್ಟ ಸಾಧ್ಯ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಶಾಲೆಗೆ ಸಮೀಪದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಆಟದ ಮೈದಾನ ವ್ಯವಸ್ಥೆ ಕಲ್ಪಿಸಿದಲ್ಲಿ ಶಾಲೆಯ ಪ್ರಾರಂಭಕ್ಕೆ ಪರವಾನಿಗೆ ನೀಡ ಬಹುದು ಎಂದು ಶಿಕ್ಷಣ ಇಲಾಖೆಗೆ ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ಒಂದರಿಂದ ಹತ್ತನೇ ತರಗತಿಯವರೆಗಿನ ಶಾಲೆಯನ್ನು ತೆರೆಯುವುದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ಎರಡು ಎಕರೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಪ್ರದೇಶಗಳಲ್ಲಿ ಕನಿಷ್ಟ ಒಂದೂವರೆ ಎಕರೆ, ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ಕನಿಷ್ಟ ಒಂದು ಎಕರೆ ಜಮೀನು ಶಾಲೆಯ ಮಾಲಿಕನ ಸ್ವಂತದ್ದಾಗಿರಬೇಕು. ಅಲ್ಲದೆ, ಭೂಮಿ ಪರಿವರ್ತಿತವಾಗಿರಬೇಕು ಎಂದು ರಾಜ್ಯ ಸರಕಾರ 2014ರ ನವೆಂಬರ್ 11ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು.
Advertisement