ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ಬರುತ್ತಿರುವ ಎಲ್ಇಡಿ ಬಲ್ಬ್ ವಿತರಣೆಯ ಯೋಜನೆಗೆ `ಹೊಸ ಬೆಳಕು' ಎಂದು ಹೆಸರು ನೀಡಲಾಗಿದ್ದು, ಡಿಸೆಂಬರ್ 11ರಿಂದ ಬಲ್ಬ್ ವಿತರಣೆ
ಕಾರ್ಯಕ್ರಮ ಶುರುವಾಗಲಿದೆ.
ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಸುವುದಕ್ಕೆ ಚುನಾವಣಾ ಆಯೋಗದಿಂದ ಅನುಮತಿ ಸಿಕ್ಕಿದೆ. ಆದರೆ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಪಟ್ಟಂತೆ ಹೊಸ ಘೋಷಣೆ ಮಾಡದೇ ಇರುವಂತೆ ಸೂಚನೆ ನೀಡಲಾಗಿದೆ. ಹೊಸ ಬೆಳಕು ಯೋಜನೆ ಇಂಧನ ಕ್ಷಮತೆಗಾಗಿ ಜಾರಿಗೆ ತರಲಾಗುತ್ತಿದೆಯೇ ವಿನಃ ಇದರಲ್ಲಿ ಯಾವುದೇ ಸಬ್ಸಿಡಿ ಸೌಲಭ್ಯ ಇರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಭವಿಷ್ಯದಲ್ಲಿ ಇಂಧನ ಸಂರಕ್ಷಣೆಗೆ ಪ್ರೋತ್ಸಾಹ ನೀಡಬೇಕಿದ್ದರೆ ಎಲ್ಇಡಿ ಬಳಕೆ ಅನಿವಾರ್ಯ. 6 ಕೋಟಿ ಎಲ್ಇಡಿ ಬಲ್ಬ್ ವಿತರಣೆ ಮಾಡುವುದಕ್ಕೆ ಎನರ್ಜಿ ಎಫೀಶಿಯನ್ಸ್ ಆಫ್ ಇಂಡಿಯಾ ಉದ್ದೇಶಿಸಿದೆ. ಚಾಕ್ಗಳಿಲ್ಲ ದ ಟ್ಯೂಬ್ ಲೈಟ್ ತಯಾರಿಕೆಗೂ ಬೇಡಿಕೆ ಇದೆ. ಭವಿಷ್ಯದಲ್ಲಿ ಈ ಬಗ್ಗೆ ಯೋಚನೆ ನಡೆಸಲಾಗುವುದು ಎಂದು ವಿವರಿಸಿದರು. 8992 ಸಿಬ್ಬಂದಿ ನೇಮಕ: ರಾಜ್ಯ ಇಂಧನ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಹೆಸ್ಕಾಂಗಳಿಗೆ ಅಗತ್ಯವಾದ 8080 ಲೈನ್ಮನ್ಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನೇರ ನೇಮಕ
ಮಾಡಿಕೊಳ್ಳಲಾಗಿದೆ. 413 ಅಸಿಸ್ಟೆಂಟ್ ಎಂಜಿನಿಯರ್, 480 ಜ್ಯೂನಿಯರ್ ಎಂಜಿನಿಯರ್, 15 ಅಕೌಂಟೆಂಟ್ಸ್ಗಳ ನೇಮಕವೂ ನಡೆದಿದೆ. ಒಟ್ಟೂ 8992 ಸಿಬ್ಬಂದಿ ನೇಮಕವಾಗಿದೆ.
ಅತ್ಯಂತ ಪಾರದರ್ಶಕ ವಿಧಾನದಲ್ಲಿ ಈ ನೇಮಕ ನಡೆದಿದ್ದು, ಸದ್ಯದಲ್ಲೇ ನೇಮಕ ಆದೇಶ ನೀಡಲಾಗುತ್ತದೆ ಎಂದು ಹೇಳಿದರು. ಶಿವನಸಮುದ್ರ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆ ಸಂಬಂಧ ಕೆಲ ಬೆಳವಣಿಗೆಗಳು ಆಗಿವೆ. ಕೇಂದ್ರ ಇಂಧನ ಇಲಾಖೆ ಕಾರ್ಯ ದರ್ಶಿ ಪಿ.ಕೆ.ಪೂಜಾರ್ ಅಧ್ಯಕ್ಷತೆಯಲ್ಲಿ ಡಿಸೆಂಬರ್ 8ರಂದು ಉಭಯ ರಾಜ್ಯಗಳ ಸಭೆ ಕರೆಯಲಾಗಿದೆ. ಸದ್ಯಕ್ಕೆ ತಮಿಳು ನಾಡಿಗೆ ಹರಿದು ಹೋಗುತ್ತಿರುವ ನೀರನ್ನು ನಾವು ನಿಲ್ಲಿಸುವುದಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ತಿಳಿಸಿದರು.
Advertisement