ಬೆಂಗಳೂರು: ಜಾತೀಯತೆ, ಕೋಮುವಾದವನ್ನು ಹೋಗಲಾಡಿಸಿ ಸಾಮರಸ್ಯ ಕಾಪಾಡಲು ಧಾರ್ಮಿಕ ವಲಯಕ್ಕೆ ಮಾತ್ರ ಸಾಧ್ಯ. ಆದರೆ, ಧಾರ್ಮಿಕ ಮುಖಂಡರು ಜಾತೀಯತೆ, ಕೋಮುವಾದ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಚಿಂತಕ ಕೆ. ಮರುಳಸಿದ್ದಪ್ಪ ಟೀಕಿಸಿದ್ದಾರೆ.
ನಿಡುಮಾಮಿಡಿ ಸಂಸ್ಥಾನ ಗುರುವಾರ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೋಮುವಾದ, ಜಾತೀಯತೆಯನ್ನು ಸಾರುತ್ತಿರುವುದು ರಾಜಕಾರಣಿಗಳಲ್ಲ, ಧಾರ್ಮಿಕ ಮಠಗಳೇ ಜಾತಿರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.
ಅಶಿಕ್ಷಿತರು, ಹಿಂದುಳಿದ ವರ್ಗಗಳ ಮಾನವ ಹಕ್ಕುಗಳನ್ನು ಪುರೋಹಿತ ವರ್ಗ, ಕೆಲವು ರಾಜಕೀಯ ಬಲದಿಂದ ಕೊಂದು ಹಾಕಲಾಗುತ್ತಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ನಾಲ್ಕನೇ ಅಂಗವಾಗಿ ಮಾಧ್ಯಮ ಇದ್ದರೂ ಮಾನವ ಹಕ್ಕುಗಳನ್ನು ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಬೇಸರಿಸಿದರು.
ನಾಮರೂಪದಲ್ಲಿ ಮಾನವನಾದರೆ ಸಾಲದು ಗುಣ, ನಡವಳಿಕೆಯಲ್ಲಿ ಉತ್ತಮ-ನಾದಾಗ ಮಾತ್ರ ಆತ ನಿಜವಾದ ಮಾನವ ಎಂದೆನಿಸಿಕೊಳ್ಳಲು ಸಾಧ್ಯ ಎಂದು ನಿಡುಮಾಮಿಡಿ ಮಠದ
ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಬಿsಪ್ರಾಯಪಟ್ಟರು. ಇಬ್ಬಂದಿತನ, ಒಡಕು ವ್ಯಕ್ತಿತ್ವ, ಬೂಟಾಟಿಕೆ, ಅವಕಾಶವಾದಿತನ ಸಾಹಿತ್ಯ ವಲಯದಲ್ಲೂ ಹೆಚ್ಚಾಗಿದೆ. ಎಲ್ಲ ಧರ್ಮದ ಜೀವಾಳವನ್ನು ಮತೀಯ ಸಂಕೋಲೆಯಲಿ ಕುಬ್ಜಗೊಳಿಸಲಾಗುತ್ತಿದೆ. ಧರ್ಮ ಬೆಳೆಯಬೇಕು. ಆದರೆ ಅದರ ಜತೆಗೆ ಧರ್ಮಾಂಧತೆ ಬೆಳೆಯಬಾರದು. ಒಂದು ವೇಳೆ ಬೆಳೆದರೆ, ಸಾಮಾಜಿಕ ವಾತಾವರಣ ಕಲುಷಿತವಾಗುತ್ತದೆ ಎಂದರು.
ಎಲ್ಲ ಪೌರಾಡಳಿತ ಸಂಸ್ಥೆಗಳಲ್ಲಿನ ಆಯವ್ಯಯದಲ್ಲಿ ಶೇ.0.5 ಹಣವನ್ನು ಮೌಢ್ಯಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಮೀಸಲಿಡಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಾಗೆಯೇ ಮೌಢ್ಯಾ ಚರಣೆ ಪ್ರತಿಬಂಧಕ ಕಾಯ್ದೆಗೆ ಸರ್ಕಾರ ಆದಷ್ಟು ಬೇಗ ಒಂದು ರೂಪ ಕೊಡಬೇಕು. ಯಾವುದೇ ಒತ್ತಡಗಳಿಗೆ ಒಳಗಾಗದೇ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ಕಾನೂನನ್ನಾಗಿ ರೂಪುಗೊಳಿಸಿದಾಗ ಮೌಢ್ಯ ಹೊಡೆದೋಡಿಸಲು ಸಾಧ್ಯ ಎಂದು ಹೇಳಿದರು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೆ.ಮರುಳಸಿದ್ದಪ್ಪ ಅವರಿಗೆ ಮಾನವತಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೋಗಿಲ ಸಿದ್ದರಾಜು ಮತ್ತು ತಂಡ ಮಾನವತಾ ಗೀತೆಗಳ ಗಾಯನ ಪ್ರಸ್ತುತಪಡಿಸಿತು.
Advertisement