ಬೆಂಗಳೂರು: ಚಿತ್ರಕಲಾ ಪರಿಷತ್ತಿನ ಸದಸ್ಯತ್ವದ ಗೊಂದಲಗಳಿಗೆ ತೆರೆ ಎಳೆದಿರುವ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಬಿ.ಎಸ್. ಹರೀಶ್ ನೇತೃತ್ವದ ವಿಚಾರಣೆ ಸಮಿತಿಯು, ಏಳು ಮಂದಿ ಸದಸ್ಯತ್ವ ಕ್ರಮಬದ್ಧವಾಗಿದೆ ಎಂದು ತೀರ್ಪು ನೀಡಿದೆ.
ಸಿಕೆಪಿಯ ಹಾಲಿ ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಸದಸ್ಯರಾದ ಎ.ರಾಮಕೃಷ್ಣಪ್ಪ, ಪ್ರೊ.ಕೆ.ಈ. ರಾಧಾಕೃಷ್ಣ, ಹರೀಶ್ ಜೆ. ಪದ್ಮನಾಭ, ಉಮಾ ಪಾಟೀಲ್, ಜಿ. ಎನ್. ಸತ್ಯನಾರಾಯಣ, ಡಾ.ಜಿ. ಲಕ್ಷ್ಮೀಪತಿ ಅವರ ಸದಸ್ಯತ್ವ ಪ್ರಶ್ನಿಸಿ ಎಸ್. ಎನ್. ಶ್ರೀದೇವಿ ರಾಜ್ಯಪಾಲರಿಗೆ ದೂರು ನೀಡಿ, ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರ ಕಲಂ 25ರ ಅಡಿ ವಿಚಾರಣೆಗೆ ಕೋರಿದ್ದರು. ಅದರಂತೆ ವಿಚಾರಣೆ ನಡೆದು ಈ ತೀರ್ಪು ಹೊರಬಿದ್ದಿದೆ. ಇದೇ ವೇಳೆ `ದೂರಿನಂತೆ ಸಿಕೆಪಿ ಸದಸ್ಯರಲ್ಲದವರು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅಂಶವನ್ನು ಪುಷ್ಟೀಕರಿಸುವಂತೆ ಯಾವುದೇ ಹೇಳಿಕೆ ಅಥವಾ ಪುರಾವೆಗಳನ್ನು ಒದಗಿಸಿಲ್ಲ' ಎಂದು ಪುಟ 27ರಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿಯಲ್ಲಿ ಇನ್ನಷ್ಟು ವಿಚಾರಗಳ ಬಗ್ಗೆ ಸತ್ಯ ಶೋಧನೆ ಮಾಡಲಾಗಿದ್ದು, ಡಾ. ರೋರಿಕ್ ವರ್ಣಚಿತ್ರ ಹಾಳಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಬಯಲು ರಂಗಮಂದಿರ ನಿರ್ಮಾಣ ಇಂದಿನ ಕಾರ್ಯಕಾರಿ ಸಮಿತಿಯಿಂದ ನಡೆದಿಲ್ಲ, ಆಡಳಿತಾಧಿಕಾರಿಗಳು ಕ್ರಮಬದ್ಧವಾಗಿಯೇ ಕಾಮಗಾರಿ ಕೈಗೊಂಡಿದ್ದಾರೆ. ಅಲ್ಲದೆ, ಮೈಸೂರು ಸಾಂಪ್ರದಾಯಿಕ ಚಿತ್ರಕಲಾಕೃತಿಗಳು ಹಾಳಾಗದೆ ಹಾಗೆ ಉಳಿದಿರುವ ಬಗ್ಗೆಯೂ ಈ ವರದಿ ಬೆಳಕು ಚೆಲ್ಲಿದೆ.
Advertisement