ಬೆಂಗಳೂರು: ಎಚ್ಎಂಟಿ ವಾರ್ಡ್ ಪ್ರತಿನಿಧಿಸುವ ಬಿಬಿಎಂಪಿ ಸದಸ್ಯೆ ಆಶಾ ಸುರೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ.
ಶಾಸಕ ಮುನಿರತ್ನ ಅವರು ತಮ್ಮ ಬೆಂಬಲಿಗರೊಂದಿಗೆ ಬೆಳಗ್ಗೆ ಪೀಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸುವ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯೆ ಆಶಾ ಸುರೇಶ್ ಅವರ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡುವ ರೀತಿ ಮಾತನಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪಾದಯಾತ್ರೆ ವೇಳೆ ಸ್ಥಳೀಯ ಸದಸ್ಯೆ ಕಾಣದಿರುವ ಬಗ್ಗೆ ಶಾಸಕರಿಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಆಶಾ ಸುರೇಶ್ ವಿರುದ್ಧ ಶಾಸಕರು ಏಕವಚನದಲ್ಲಿ ಮಾತನಾಡಿದ್ದಾರೆ.
ಇದನ್ನು ಆಶಾ ಸುರೇಶ್ ಬೆಂಬಲಿಗರು ವಿರೋಧಿಸಿದ್ದು, ಶಾಸಕರ ಬೆಂಬಲಿಗರೊಂದಿಗೆ ಮಾತಿನ ಚಕಮಕಿಗೆ ಮುಂದಾಗಿದ್ದಾರೆ. ಪರಿಸ್ಥಿತಿ ಅರಿತ ಪೊಲೀಸರು ಮಧ್ಯೆ ಪ್ರವೇಶಿಸಿ ಇಬ್ಬರ ಬೆಂಬಲಿಗರನ್ನೂ ಸಮಾಧಾನಪಡಿಸಿದ್ದರು. ಬಳಿಕ ಪೊಲೀಸ್ ಠಾಣೆಗೆ ತೆರಳಿರುವ ಆಶಾ ಸುರೇಶ್ ಬೆಂಬಲಿಗರು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಶಾಸಕರ ವಿರುದ್ಧ ದೂರು ದಾಖಲಿಸಿದ್ದರು.
ಸ್ಥಳೀಯ ಪತ್ರಿನಿಧಿಯನ್ನು ಬಿಟ್ಟು ಶಾಸಕರು ವಾರ್ಡಿನಲ್ಲಿ ಪಾದಯಾತ್ರೆ ಮಾಡಿದ್ದಾರೆ. ವಾರ್ಡಿನ ಸದಸ್ಯೆ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡುವ ರೀತಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದ್ದರಿಂದ ಶಾಸಕರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಠಾಣಾ ಪೊಲೀಸರು ತಿಳಿಸಿದ್ದಾರೆ.
Advertisement