ಬೆಂಗಳೂರು: ಪೊಲೀಸರ ಸೋಗಿನ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿ ಬರುತ್ತಿದ್ದ ಇಬ್ಬರು ಟೆಕ್ಕಿಗಳನ್ನು ನೈಸ್ ರಸ್ತೆಯ ಕೆಳ ಸೇತುವೆ ಬಳಿ ಅಡ್ಡಗಟ್ಟಿ ಹೆದರಿಸಿ ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ನಾಗರಬಾವಿ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ವರುಣ್ (27) ಮತ್ತು ಈತನ ಗೆಳತಿ ದರೋಡೆಗೆ ಒಳಗಾದವರು. ಇವರಿಬ್ಬರೂ ಸಂಜೆ 6 ಗಂಟೆ ಸುಮಾರಿನಲ್ಲಿ ನೈಸ್ ರಸ್ತೆಯ ಕೆಳ ಸೇತುವೆಯ ಬನ್ನೇರುಘಟ್ಟ ರಸ್ತೆಯ ಜಂಕ್ಷನ್ನಲ್ಲಿ ಕಾರಿನಲ್ಲಿ ಬರುತ್ತಿದ್ದರು.
ಈ ವೇಳೆ ಕಾರಿನಲ್ಲಿ ಬಂದಿರುವ ಇಬ್ಬರನ್ನು ಈ ದುಷ್ಕರ್ಮಿಗಳು ತಡೆದು, ತಾವು ಪೊಲೀಸರು ಎಂದು ಹೇಳಿದ್ದಾರೆ. ನಂತರ ಟೆಕ್ಕಿಗಳ ಪೂರ್ವಪರ ವಿಚಾರಿಸಿ ಹಲವು ಪ್ರಶ್ನೆ ಕೇಳಿ ಹೆದರಿಸಿದ್ದಾರೆ. ಕಾರಿನಲ್ಲಿ ಅನೈತಿಕ ಚುಟುವಟಕೆ ನಡೆಸುತ್ತಿದ್ದೀರಾ ಎಂದು ಧಮಕಿ ಹಾಕಿದ್ದಾರೆ. `ನಾವು ಅಂಥವರಲ್ಲ' ಎಂದು ವರುಣ್ ಎಷ್ಟೇ ಹೇಳಿದರೂ, ಹಲ್ಲೆಗೆ ಮುಂದಾಗಿದ್ದಾರೆ. ಪೊಲೀಸರ ಸೋಗಿನ ದುಷ್ಕರ್ಮಿಗಳ ನಡವಳಿಕೆಯಿಂದ ವರುಣ್ ಮತ್ತು ಆತನ ಗೆಳತಿ ಬೆಚ್ಚಿ ಬಿದ್ದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ವರುಣ್ ನಮ್ಮ ಬಳಿ ನಗದು ಹಣ ಇಲ್ಲ ಎಂದಿದ್ದಾರೆ. ಬಳಿಕ ಕಾರನ್ನು ಸಮೀಪದ ಎಟಿಎಂ ಬಳಿಗೆ ಚಲಾಯಿಸುವಂತೆ ಏರು ದನಿಯಲ್ಲಿ ಗದರಿಸಿರುವ ದುಷ್ಕರ್ಮಿಗಳು, ತಲಘಟ್ಟಪುರದಲ್ಲಿರುವ ಎಸ್ಬಿಐ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಕರೆದೊಯ್ದು 60 ಸಾವಿರ ಡ್ರಾ ಮಾಡಿಸಿದ್ದಾರೆ. ಬಳಿಕ ಹಣವನ್ನು ಪಡೆದು ವರುಣ್ ಮತ್ತು ಆತನ ಗೆಳತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಈ ಸಂಬಂಧ ವರುಣ್ ಅವರು ತಲಘಟ್ಟಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಸಂಬಂಧ ನೈಸ್ ರಸ್ತೆ ಹಾಗೂ ಎಟಿಎಂ ಕೇಂದ್ರದಲ್ಲಿ ಅಳವಡಿಸಿರುವ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
Advertisement