ಬೆಂಗಳೂರು: ಬೆಂಗಳೂರಿನ ಸಿಸಿಬಿ ಕಚೇರಿ ಆವರಣ ರೌಡಿಗಳ ರಾಜಿ ಅಡ್ಡೆಯಾಗುತ್ತಿದೆ ಎಂದು ಆರೋಪಿಸಿ ಪತ್ರವೊಂದು ರಾಜ್ಯಪಾಲರ ಅಂಗಳ ಸೇರಿದೆ.
ಚಾಮರಾಜಪೇಟೆ ಕೆಂಪೇಗೌಡನಗರದ ವಾಸು ಎಂಬ ವ್ಯಕ್ತಿ ಸಿಸಿಬಿ ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಸಂಪರ್ಕ ಹೊಂದಿದ್ದಲ್ಲದೇ, ಸಮಾಜಘಾತುಕ ವ್ಯಕ್ತಿಗಳು, ಕಳ್ಳರು, ರೌಡಿಗಳ ಮಧ್ಯವರ್ತಿಯಾಗಿ ರಾಜಿ ಮಾಡಿಸುವ ಕೆಲಸ ಮಾಡುತ್ತಾನೆ. ಅಧಿಕಾರಿಗಳ ಪರವಾಗಿ ದುಡ್ಡು ಪಡೆಯುತ್ತಾನೆ. ಈತ ಬ್ರಾಹ್ಮಣನಾಗಿದ್ದು, ತನ್ನ ಜಾತಿಯಿಂದ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡು, ಅವರ ಜಾತಕ ನೋಡುವುದು, ಮನೆಯಲ್ಲಿ ಪೂಜೆಗಳನ್ನು ಮಾಡಿಸುವುದು ಮಾಡಿ ಅಧಿಕಾರಿಗಳೊಂದಿಗೆ ಸ್ನೇಹ ಬೆಳೆಸುತ್ತಾನೆ. ನಂತರ ಅಧಿಕಾರಿಗಳಂತೆ ರೌಡಿಗಳೊಂದಿಗೆ ಮಾತನಾಡಿ ಸಿಸಿಬಿ ಕಚೇರಿಗೆ ಬರುವಂತೆ ಹೇಳಿ, ಕಚೇರಿಯಲ್ಲೇ ಡೀಲ್ ಮಾಡುತ್ತಾನೆ ಎಂದು ಹೆಸರು ನೊಂದಾಯಿಸದ ಸಿಸಿಬಿಯ ಕೆಲ ಸಿಬ್ಬಂದಿಗಳು ಪತ್ರದಲ್ಲಿ ದೂರಿದ್ದಾರೆ.
ಹಿರಿಯ ಮತ್ತು ಕಿರಿಯ ಅಧಿಕಾರಿಗಳ ನಡುವೆ ವೈಷಮ್ಯ ಬರುವಂತೆ ಮಾಡಿದ್ದಾನೆ.ಇದರಿಂದ ಕಚೇರಿಯಲ್ಲಿ ಇದ್ದ ಒಳ್ಳೆಯ ವಾತಾವರಣ ಕೂಡ ಹಾಳಾಗಿದೆ. ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ರೌಡಿಗಳೊಂದಿಗೆ ಹೇಳಿಕೊಂಡು ಕೆಲ ಸಮಾಜಘಾತುಕ ಕೃತಗಳನ್ನು ಎಸಗುತ್ತಿದ್ದಾನೆ. ಇಂತಹ ವ್ಯಕ್ತಿಯಿಂದ ಪೊಲೀಸ್ ಇಲಾಖೆಯ ಸ್ವಾಸ್ಥ ಹಾಳಾಗಿದ್ದು, ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಸಿಬಿ ಸಿಬ್ಬಂದಿಗಳು ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
Advertisement