ಎಟಿಎಂ ದೋಚಲು ಯತ್ನ: ಇಬ್ಬರ ಬಂಧನ
ಬೆಂಗಳೂರು: ಇಂದಿರಾನಗರ ಸಿಎಂಎಚ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿ ಹಣ ದೋಚಲು ಯತ್ನಿಸಿದ ದುಷ್ಕರ್ಮಿಗಳಿಬ್ಬರನ್ನು ಸೆಕ್ಯುರಿಟಿ ಗಾರ್ಡ್, ಸ್ಥಳೀಯರು ಹಿಡಿದು ಥಳಿಸಿ ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಿಹಾರ ಮೂಲದ ರಾಮ್ ಕುಮಾರ್ ಗುಪ್ತಾ (28) ಮತ್ತು ಲಕ್ಷ್ಮೀದೇವಿ ನಗರದ ಮ್ಯಾಥ್ಯು (22) ಬಂಧಿತರು. ಸೋಮವಾರ ನಸುಕಿನ 3 ರ ಸುಮಾರಿಗೆ ಪಲ್ಸರ್ ಬೈಕ್ ನಲ್ಲಿ
ಬಂದ ಆರೋಪಿಗಳು, ಮಾರಕಾಸ್ತ್ರಗಳಿಂದ ಎಟಿಎಂ ಕೇಂದ್ರದ ಬಾಗಿಲು ಒಡೆದು ಒಳನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಘಟಕದೊಳಗಿದ್ದ ಸೆಕ್ಯುರಿಟಿ ಗಾರ್ಡ್ ವೆಂಕಟಕೃಷ್ಣ, ಬಾಗಿಲು ಭದ್ರ ಪಡಿಸಿ ಪೊಲೀಸ್ ನಿಯಂತ್ರ ಣ ಕೊಠಡಿಗೆ ಕರೆ ಮಾಡಿದ್ದಾರೆ.
ಮಾಹಿತಿ ಪಡೆದ ಇಂದಿರಾ ನಗರದ ಗಸ್ತು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರನ್ನು ಗಮನಿಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಕಾರಿನಲ್ಲಿ ಬರುತ್ತಿದ್ದ ಯುವಕರು ಹಾಗೂ ಸೆಕ್ಯುರಿಟಿ ಗಾರ್ಡ್ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರು ಟ್ರಿನಿಟಿ ವೃತ್ತದಲ್ಲಿರುವ ಬಾರ್ನಲ್ಲಿ ಕೆಲಸ ಮಾಡುತ್ತಿದ್ದರು. ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಇಂದಿರಾನಗರ ಪೊಲೀಸರು ತಿಳಿಸಿದರು.