ಟಾಟಾ ಏಸ್ ಪಲ್ಟಿ: 5 ಸಾವು
ದಾವಣಗೆರೆ: ಮದುವೆಗೆಂದು ಹೊರಟಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ಐವರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜೆಲ್ಲೆಯಲ್ಲಿ ಸಂಭವಿಸಿದೆ.
ಟಾಟಾ ಏಸ್ ವಾಹನದಲ್ಲಿ ವಧುವನ್ನು ಬಳ್ಳಾರಿಗೆ ಕರೆದೊಯ್ಯುವ ವೇಳೆ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಗ್ರಾಮದ ನಿಟ್ಟೂರು ಬಳಿ ಈ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರು ಮಹಿಳೆಯರು ಮತ್ತು ಚಾಲಕ ಸೇರಿದಂತೆ ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ವಾಹನದಲ್ಲಿದ್ದ ಇತರೆ 18 ಮಂದಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ವಧು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನ ಅತಿವೇಗ ಮತ್ತು ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಮೃತರನ್ನು ಚಾಲಕ ಶಮಿವುಲ್ಲಾ(28), ಲಕ್ಷಮ್ಮ(48), ಲಕ್ಷ್ಮಿದೇವಿ(55), ರಾಜಪ್ಪ(50), ರಾಮಕೃಷ್ಣ(40) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದಾವಣಗೆರೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ಥಳಕ್ಕೆ ಎಸಿಪಿ ಬಾವಿಮನೆ, ಡಿವೈಎಸ್ಪಿ ನ್ಯಾಮೇಗೌಡ, ಇನ್ಸ್ಪೆಕ್ಟರ್ ಪಂಪಾಪತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.