ಸ್ಪೀಕರ್ ವಿರುದ್ಧ ಮುಖ್ಯಮಂತ್ರಿ ಬಣ ಮೊಳಗಿಸಿದ ಅಪಸ್ವರ
ಬೆಂಗಳೂರು: ಸದನದ ಒಳಗೆ-ಹೊರಗೆ ಸಕಾರ್ರರದ 'ಶೀಲಹರಣ'ಮಾಡುತ್ತಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ಧ ಗರಂ ಆಗಿರುವ ಸಿಎಂ ಸಿದ್ದರಾಮಯ್ಯ ಬಣ, ಅವರಿಗೆ ಪರ್ಯಾಯ ದಾರಿ ತೋರುವಂತೆ ಹೈಕಮಾಂಡ್ಗೆ ಮೊರೆ ಇಟ್ಟಿದೆ.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರಿಗಿಂತಲೂ ಅತ್ಯುತ್ತಮ ರೀತಿಯಲ್ಲಿ ಕಾಗೋಡು ತಿಮ್ಮಪ್ಪ ಸದನದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಹೆಡ್ ಮಾಸ್ತರ್ಗಿರಿ ಮೂಲಕ ಕಲಾಪದ ವೇಳೆ ಸಚಿವರ ಸಾಮರ್ಥ್ಯ ಬಯಲು ಮಾಡುತ್ತಿದ್ದಾರೆ.
ಅವರ ಚಾಟಿ ಏಟು ಹೆಚ್ಚಾಗಿ ಸಿಎಂ ಸಿದ್ದರಾಮಯ್ಯ ಬಣದ ಸಚಿವರಿಗೇ ಬಹಳ ವೇದನೆ ಉಂಟು ಮಾಡುತ್ತಿದೆ. ಸದನದ ಹೊರಗೂ ಅವರು ಸರ್ಕಾರದ ವಿರುದ್ಧ ಕೆಂಡ ಸುರಿಯುತ್ತಿದ್ದಾರೆ. ಇದು ಸಿಎಂ ಬಣಕ್ಕೆ ನುಂಗಲಾರದ ತುತ್ತಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಕರ್ನಾಟಕವನ್ನು ಕಾಂಗ್ರೆಸೆ ಮುಕ್ತಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ ಮರುದಿನ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಆಕ್ರೋಶದ ಮಳೆಗರೆಯುತ್ತಿದ್ದರು.
ಆದರೆ ಅದೇ ದಿನ ಮತ್ತೆ ಸರ್ಕಾರದ ವಿರುದ್ಧ ಗುಡುಗಿದ ಸ್ಪೀಕರ್ ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ನೀವೇಕೆ ಇರಬೇಕೆಂದು ಪ್ರಶ್ನಿಸಿದರು. ಇದು ಸಿಎಂ ಆಪ್ತವಲಯದ ಸಚಿವರು, ಶಾಸಕರನ್ನು ಕೆರಳಿಸಿದೆ.
ಉನ್ನತ ಮೂಲಗಳ ಪ್ರಕಾರ, ಸರ್ಕಾರಕ್ಕೆ ಪ್ರತಿಪಕ್ಷಗಳಿಗಿಂತ ಸ್ಪೀಕರ್ ಮಗ್ಗಲುಮುಳ್ಳಾಗಿದ್ದಾರೆ. 'ಕಾಗೋಡುಕಾಟ' ಅತಿಯಾಗಿದೆ. ಅವರು ತಮ್ಮ ಧೋರಣೆ ಬದಲಾಯಿಸಿಕೊಳ್ಳುವಂತೆ ಕಾಣುತ್ತಿಲ್ಲ.
ಬದಲಾಗದೇ ಇದ್ದರೆ ಸರ್ಕಾರಕ್ಕೆ ಮುಜುಗರ ತಪ್ಪಿದ್ದಲ್ಲ. ಈಗ ಇರುವುದು ಎರಡೇ ದಾರಿ. ಒಂದೋ ಈಗಿರುವ ಸ್ಥಾನದಿಂದ ಬದಲಾಯಿಸಬೇಕು. ಇಲ್ಲವಾದಲ್ಲಿ ತೆಪ್ಪಗಿರುವಂತೆ ಆದೇಶಿಸಬೇಕು ಎಂದು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಇಕ್ಕಟಿನಲ್ಲಿ ಸಿಎಂ ಬಣ: ಇದಕ್ಕೆ ಪ್ರತಿಯಾಗಿ ಕಾಗೋಡು ಅವರಿಗೆ ಯಾವ ಸ್ಥಾನ ಕಲ್ಪಿಸಬೇಕು ಎಂಬುದು ಮಾತ್ರ ಬಗೆಹರಿಯದ ಸಮಸ್ಯೆ. ಸ್ಪೀಕರ್ ಸ್ಥಾನದಿಂದ ಅವರನ್ನು ಬದಲಾಯಿಸದರೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಸಣ್ಣಪುಟ್ಟ ಖಾತೆ ಕೊಟ್ಟರೆ ಅವರು ಒಪ್ಪುವವರಲ್ಲ. ಕಂದಾಯ, ಲೋಕಪಯೋಗಿಯಂಥ ಖಾತೆ ನೀಡಬೇಕು.
ಅವು ಸಿಎಂ ಆಪ್ತ ವರ್ಗದ ಬಳಿ ಇದೆ. ಅಲ್ಲದೆ, ತಮ್ಮ ಅನುಭವ, ಹಿರಿತನ ಮತ್ತು ಬಂಡಾಯ ಮನೋಭಾವದಿಂದ ಅವರು ಸಂಪುಟದಲ್ಲಿ ಸಿದ್ದರಾಮಯ್ಯನವರನ್ನೇ ಪ್ರಶ್ನಿಸಬಲ್ಲರು.
ಇನ್ನು ಕೆಪಿಸಿಸಿ ಅಧ್ಯಕ್ಷಗಿರಿ ಕೊಟ್ಟರೆ ಸರ್ಕಾರವನ್ನು ಮತ್ತಷ್ಟು ಚುಚ್ಚಲು ಕಾಗೋಡಿಗೆ ಅನುಕೂಲವಾಗುತ್ತದೆ. ಶಾಂತಸ್ವಭಾವದ ಡಾ.ಜಿ.ಪರಮೇಶ್ವರ ಕೊಡುವ ಕಿರಿಕಿರಿಯೇ ಸಹಿಸಲಾಗದ ಸಿದ್ದರಾಮಯ್ಯ ಬಣ ಇನ್ನು ಕಾಗೋಡು ಹೊಡೆತ ತಡೆದುಕೊಳ್ಳಬಲ್ಲದೇ? ಇನ್ನೊಂದು ತಾರ್ಕಿಕ ಸಮಸ್ಯೆ ಇದೆ. ಸಿಎಂ ಅವರಂತೆ ಕಾಗೋಡು ಸಹ ಹಿಂದುಳಿದ ವರ್ಗಕ್ಕೆ ನೀಡುವುದು ಅಸಾಧ್ಯ. ಕಾಗೋಡು ಒಪ್ಪುವ ಸಾಧ್ಯತೆಯೂ ಕಡಿಮೆ.
ಇನ್ನು ಸ್ಪೀಕರ್ ಸ್ಥಾನದಿಂದ ಅವರನ್ನು ಬದಲಿಸಿ ಯಾವುದೇ ಹುದ್ದೆ ಕೊಡದೇ ಇರುವುದು ದೂರದ ಮಾತು. ಸರ್ಕಾರದ ಈ ನಡೆ ಮಲ್ಲಿಕಾರ್ಜುನ ಖರ್ಗೆ ಅಂಥ ಮುಖಂಡರನ್ನು ಕೆರಳಿಸಬಲ್ಲದು. ಜತೆಗೆ ಭಿನ್ನರ ಗುಪ್ತಧ್ವನಿಗೆ ಕಾಗೋಡು ನಿಜಾರ್ಥದಲ್ಲಿ 'ಸ್ಪೀಕರ್' ಆಗಿ ಬಿಡಬಲ್ಲರು. ಹೀಗಾಗಿ ಕಾಗೋಡು ವಿರುದ್ಧ ಬರೆಯಲಾಗಿದೆ ಎಂಬ ಪತ್ರ ಇನ್ನಷ್ಟು ಎಡವಟ್ಟು ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ