

ಬೆಂಗಳೂರು: ಶಾಂತಿನಗರ ಹೌಸಿಂಗ್ ಕೋಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಂತರ ರುಪಾಯಿಗಳ ಹಗರಣ ನಡೆದಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಯಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ವಿಧಾನಸೌಧದಲ್ಲಿರುವ ಸಹಕಾರ ಸಚಿವ ಮಹಾದೇವ ಪ್ರಸಾದ್ ಕಚೇರಿಯ ಮುಂದೆ ಮಂಗಳವಾರ ಧರಣಿ ನಡೆಸಿದರು.
ಹಗರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬ ಸದಸ್ಯರ ಹೆಸರಿನಲ್ಲಿ 197 ನಿವೇಶನಗಳು ನೋಂದಣಿಯಾಗಿವೆ. ಅನಿವಾಸಿ ಭಾರತೀಯರಿಂದ ಹಿಡಿದು ಹಲವರಿಗೆ ನಿವೇಶನ ನೀಡಲಾಗಿದೆ.
ಯಾವ ಕಾರಣಕ್ಕೂ ಪ್ರಕರಣ ಮುಚ್ಚಲು ಅವಕಾಶ ನೀಡಬಾರದು. ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಸ್ಥಳಕ್ಕೆ ಬಂದು ಎಲ್ಲರೊಂದಿಗೂ ಚರ್ಚಿಸಿದ್ದಲ್ಲದೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರಕರಣ ನಡೆದಿದ್ದು 2001ಕ್ಕಿಂತ ಮೊದಲು.
2004ರಿಂದ 2014ರವರೆಗೆ ಯಾವುದೇ ವ್ಯವಹಾರವನ್ನು ಈ ಸೊಸೈಟಿ ನಡೆಸಿಲ್ಲ. ಈ ಸಂಬಂಧ ಅಧಿಕಾರಿಗಳ ದತೆ ಹಲವಾರು ಬಾರಿ ಚರ್ಚೆ ನಡೆಸಿದ್ದೇವೆ. ಈ ತಿಂಗಳ ಅಂತ್ಯದೊಳಗಾಗಿ ಒಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಮಹಾದೇವ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.