ಮಕ್ಕಳ ಜೀವದೊಂದಿಗೆ ಚೆಲ್ಲಾಟ?
ಕಲಬುರಗಿ: ಕಲಬುರಗಿಯ ಚಿತ್ತಾಪುರ ತಾಲೂಕಿನ ಗ್ರಾಮದಲ್ಲಿರುವ ಬಿಸಿಎಂ ಇಲಾಖೆಗೆ ಸೇರಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಲಾಗಿದ್ದ ಆಹಾರ ವಿಷಯವಾಗಿ ನೂರಾರು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.
ರಾತ್ರಿ ಊಟ ಮಾಡಿದ ಮಕ್ಕಳು ಅಸ್ವಸ್ಥಗೊಂಡಾಗ ಅಲ್ಲಿದ್ದ 220 ಮಕ್ಕಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಮಕ್ಕಳನ್ನು ಪರೀಕ್ಷಿಸಿರುವ ಆಸ್ಪತ್ರೆ ವೈದ್ಯರು ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಈ ಪೈಕಿ 50 ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಅವರನ್ನು ಇನ್ನೂ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡು ಚಿಕಿತ್ಸೆ ಮುಂದುವರೆಸಲಾಗಿದೆ.
ಮಕ್ಕಳೆಲ್ಲರೂ ಊಟ ಮಾಡಿದವರೇ ವಾಂತಿ- ಭೇದಿ ಹೊಟ್ಟೆನೋವು ಎಂದಾಗ ಅಪಾಯದ ಸೂಚನೆ ಅರಿತು ತಕ್ಷಣ ಮಕ್ಕಳನ್ನು ಜಿಲ್ಲಸ್ಪತ್ರೆಗೆ ಸೇರಿಸಲಾಗಿದೆ. ವಿಷ ಆಹಾರ ಸೇವನೆ ಮಾಡಿದರೂ ಅಲ್ಪಸ್ವಲ್ಪ ತೊಂದರೆಯಲ್ಲಿಯೇ ಮಕ್ಕಳು ಪಾರಾಗಿದ್ದಾರೆ. ಯಾರಿಗೂ ಹೆಚ್ಚಿನ ತೊಂದರೆಯಾಗಿಲ್ಲ.
ಸಮಿತಿ ರಚನೆ, ವಿಚಾರಣೆಗೆ ಆದೇಶ: ಜಿಪಂ ಉಪಕಾರ್ಯದರ್ಶಿ ಯೂಸೂಫ್, ಬಿಸಿಎಂ ಅಧಿಕಾರಿ ಪಾಶಾ, ಹಿಂದಿನ ಡಿಎಚ್ ಒ, ಸಜ್ಜನಸೆಟ್ಟಿ ಶಿವರಾಜ ಹಾಗೂ ಆಹಾರ ಸುರಕ್ಷಾ ಅಧಿಕಾರಿ ಆರ್.ಎಸ್ ಬಿರಾದರ್ ಒಳಗೊಂಡ ನಾಲ್ವರ ಸಮಿತಿ ರಚಿಸಲಾಗಿದೆ. ಹೆಬ್ಬಾಳ ಶಾಲೆಯಲ್ಲಿರುವ ಅಡುಗೆ ವ್ಯವಸ್ಥೆ, ಕೋಣೆಗಳ ಶುಚಿತ್ವ ಪರಿಶೀಲಿಸಿ ವರದಿ ಸಲ್ಲಿಸಲು ಸಮಿತಿಗೆ ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್ ಸೂಚಿಸಿದ್ದು ಸರ್ಕಾರಿ ಆಸ್ಪತ್ರೆಗೆ ಖುದ್ದು ಭೇಟಿ ನೀಡಿದ್ದು ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಕಳೆದ ವಾರವೂ ಅಸ್ವಸ್ಥ: ಹೆಬ್ಬಾಳ ಮೊರಾರ್ಜಿ ಶಾಲೆಯಲ್ಲಿ ಆಹಾರ ವಿಷಯವಾಗಿ ಮಕ್ಕಳು ಅಸ್ವಸ್ಥರಾದ ಘಟನೆ ಇದೇ ಮೊದಲೇನಲ್ಲ. ಕಳೆದ ವಾರವೂ ಈ ಶಾಲೆಯಲ್ಲಿ ಆಹಾರದಲ್ಲಿ ತೊಂದರೆ ಕಂಡುಬಂದು ಅದನ್ನು ಸೇವೆವಿಸಿದ್ದ ಹತ್ತಾರು ಮಕ್ಕಳು ಆಸ್ಪತ್ರೆಗೆ ಸೇರಿದ್ದರು.
ಮಕ್ಕಳ ಜೀವದೊಂದಿಗೆ ಚೆಲ್ಲಾಟ ಯಾಕೆ?: ವಸತಿ ಶಾಲೆಯಲ್ಲಿ ಅಡುಗೆ ಸಿದ್ಧಪಡಿಸಲು ಬಳಸುತ್ತಿರುವ ಕೋಣೆ ತುಂಬಾ ಗಲೀಜಾಗಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿತ್ತು. ಆದಾಗ್ಯೂ ಇಂತಹ ಕೋಣೆಯಲ್ಲೇ ಮಕ್ಕಳಿಗೆ ಅಡುಗೆ ಸಿದ್ಧಪಡಿಸಲಾಗುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ