ಅನುದಾನಿತ ಶಿಕ್ಷಕರಿಗೆ ಸರ್ಕಾರಿ ನೌಕರರಷ್ಟೇ ವೇತನ
ಬೆಂಗಳೂರು: ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್ ಆದೇಶಗಳನ್ನು ಬದಿಗೊತ್ತಿ ರಾಜ್ಯ ಸರ್ಕಾರವು ರೂಪಿಸಿದ್ದ `ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ
ಉದ್ಯೋಗಿಗಳ ನಿಯಮಗಳು (ವೇತನ ನಿಯಂತ್ರಣ, ಪಿಂಚಣಿ ಹಾಗೂ ಇತರೆ ಸೌಲಭ್ಯಗಳು)ಕಾಯ್ದೆ -2014ಯನ್ನು ಹೈಕೋರ್ಟ್ ಅಸಾಂವಿಧಾನಿಕ ಎಂದು
ಘೋಷಿಸಿ ರದ್ದುಪಡಿಸಿದೆ. ಸರ್ಕಾರ ರೂಪಿಸಿದ್ದ ಕಾಯ್ದೆ ಯನ್ನು ಪ್ರಶ್ನಿಸಿ ಶ್ರೀಮತಿ ಗೀತಾ ಸೇರಿದಂತೆ 240ಕ್ಕೂ ಹೆಚ್ಚು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಶಿಕ್ಷಕರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ ಖಾಸಗಿ ಅನುದಾನಿತ ಪ್ರಾಥಮಿಕ, ಹಿರಿಯ ಮತ್ತು ಪ್ರೌಢಶಾಲೆ, ಪದವಿಪೂರ್ವ, ಪದವಿ ಮತ್ತು ಪಾಲಿಟೆಕ್ನಿಕ್ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸುಮಾರು ಬೋಧಕ ಸಿಬ್ಬಂದಿಗೆ ತಾವು ನೇಮಕಗೊಂಡ ದಿನದಿಂದ ವೇತನ, ಪಿಂಚಣಿ, ಹಿಂಬಾಕಿ ಸೇರಿದಂತೆ ಸೇವಾ ಸೌಲಭ್ಯ ಕಲ್ಪಿಸಲು ನಿರ್ದೇಶಿಸಿದೆ. ಈ ಆದೇಶದಿಂದಾಗಿ ರಾಜ್ಯದ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ದುಡಿಯು ತ್ತಿರುವ ಬೋಧಕ ವರ್ಗವು, ತಾವು ನೇಮಕ ಗೊಂಡ
ದಿನದಿಂದಲೇ ಅನ್ವಯವಾಗುವಂತೆ ಸರ್ಕಾರಿ ನೌಕರರಿಗೆ ತತ್ಸಮಾನವಾಗಿ ವೇತನ ಪಡೆಯಲು ಅರ್ಹರಾದಂತಾಗಿದೆ.
ಪ್ರಕರಣವೇನು?: ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಲು ಅನುಮೋದನೆ ನೀಡುವ ಸಂದರ್ಭದಲ್ಲಿ, `ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗೆ ಸೇವಾ ಸೌಲಭ್ಯಗಳನ್ನು ಸಿಬ್ಬಂದಿಗೆ ನೇಮಕಗೊಂಡ ದಿನದಿಂದ ಬದಲಾಗಿ ಅನುಮೋದನೆ ನೀಡಿದ ದಿನದಿಂದ ನೀಡಲಾಗುವುದು' ಎಂದು ಸರ್ಕಾರ ಷರತ್ತು ವಿಧಿಸಿತ್ತು. ಈ ಷರತ್ತು ಪ್ರಶ್ನಿಸಿ 2009ರಲ್ಲಿ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳು ಸರ್ಕಾರದ ಷರತ್ತು ರದ್ದುಗೊಳಿಸಿದ್ದವು. ನಂತರ ಸುಪ್ರೀಂ ಕೋರ್ಟ್ ಸಹ 2013ರಲ್ಲಿ ಈ ಷರತ್ತು ರದ್ದುಪಡಿಸಿ ಬೋಧಕ ಸಿಬ್ಬಂದಿಗೆ ಅವರು ನೇಮಕಗೊಂಡ ದಿನದಿಂದ ಅನ್ವಯವಾಗುವಂತೆ ಸೇವಾ ಸವಲತ್ತು ಕಲ್ಪಿಸಲು ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳ ನಿಯಮಗಳ (ವೇತನ ನಿಯಂತ್ರಣ, ಪಿಂಚಣಿ ಹಾಗೂ ಇತರೆ ಸೌಲಭ್ಯಗಳು)ಕಾಯ್ದೆ -2014ಯನ್ನು ರೂಪಿಸಿತ್ತು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗೆ ಸೇವಾ ಸೌಲಭ್ಯಗಳನ್ನು ಶಿಕ್ಷಣ ಸಂಸ್ಥೆಗೆ ಅನುದಾನ ಮಂಜೂರಾತಿಗೆ ಅನುಮೋದನೆ ನೀಡಿದ ದಿನದಿಂದ ಅನ್ವಯವಾಗುವಂತೆ ಕಾಯ್ದೆಯಲ್ಲಿ ನಿಯಮ ರೂಪಿಸಲಾಗಿತ್ತು. ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ 2014ರಲ್ಲಿ ಮತ್ತೊಮ್ಮೆ ಹೊಸದಾಗಿ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು.
ಸರ್ಕಾರದ ವಾದವೇನು?
ರಾಜ್ಯದಲ್ಲಿ 2,808 ಪ್ರಾಥಮಿಕ , 3,547 ಪ್ರೌಢಶಾಲೆ, 940 ಪದವಿಪೂರ್ವ ಶಿಕ್ಷಣ ಸಂಸ್ಥೆಗಳಿದ್ದ ಒಟ್ಟು 62,229 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರಿಗೆ ಕಾಲ್ಪನಿಕ ವೇತನ ಬಡ್ತಿ ಮಂಜೂರಾತಿ ಕುರಿತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಇದರಿಂದ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ