ಬೆಂಗಳೂರು: ಸಾಲಬಾಧೆಯಿಂದ ಕಂಗೆಟ್ಟಿರುವ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಅವರ ಪ್ರಾಣ ಉಳಿಸಿವುದು ಸಾಮಾಜಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಪೋರೇಟ್ ವಲಯ ಸೇರಿದಂತೆ ಸಂಘ ಸಂಸ್ಥೆಗಳು ಮುಂದಾಗಬೇಕುಎಂದು ಲೇಖಕಿ ಡಾ. ವೈದೇಹಿ ಆಶಯ ವ್ಯಕ್ತ ಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಈಗಾಗಲೇ ಕಾರ್ಪೋರೇಟ್ ವಲಯದಿಂದ ಅಜೀಂ ಪ್ರೇಮ್ ಜಿ ರೈತರ ಸಾವಿನ ಬಗ್ಗೆ ಕಳಕಳಿ ವ್ಯಕ್ತ ಪಡಿಸಿದ್ದಾರೆ. ಕೇವಲ 2 ಲಕ್ಷ ರೂಪಾಯಿ ಸಾಲಕ್ಕಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವು ಘೋರ ಘಟನೆಗಳಿಗೆ ಅಂತ್ಯವಿಲ್ಲದಂತಾಗಿದೆ. ಇನ್ನಾದರೂ ಕನಿಷ್ಠ ಸಾಲವಿರುವ ರೈತರನ್ನು ಗುರುತಿಸಿ ಕಾರ್ಪೋರೇಟ್ ವಲಯ ಹಾಗೂ ಸಂಘ ಸಂಸ್ಥೆಗಳು ಸಾಲ ತೀರಿಸಿ ಅನ್ನದಾತನನ್ನು ಉಳಿಸಿಕೊಳ್ಳಬೇಕೆಂದು ಕಳಕಳಿ ವ್ಯಕ್ತ ಪಡಿಸಿದರು.
ದೊಡ್ಡ ಪ್ರಮಾಣದ ಉದ್ಯೋಗ ನೀಡುವ ಸಂಸ್ಥೆಗಳಿದ್ಜರೇನು, ಅನ್ನ ಕೊಡುವ ರೈತನನ್ನು ಕಳೆದುಕೊಂಡರೆ ಮುಂದೆ ಅನ್ನ ನೀಡುವ ಕೈ ಯಾವುದು? ಸಮಾಜದಲ್ಲಿ ಹೆಣ್ಣು ರೈತ, ಹಾಗೂ ಭೂಮಿಗೆ ಪೆಟ್ಟು ಬೀಳುತ್ತಿದೆ. ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಲೋಕಜ್ಞಾನವಿಲ್ಲದವರಿಗೆ ಪಟ್ಟ: ನಾಲ್ವಡಿ ಕೃಷ್ಣರಾಜ ಒಡೆಯರು ಅಭಿವೃದ್ಧಿ ಪಡಿಸದ ಕ್ಷೇತ್ರವಿಲ್ಲ. ಅವರು ಪ್ರಜಾಪ್ರಭುವಾಗಿದ್ದರು. ಆದರೆ ಈಗ ಪ್ರಜಾಪ್ರಭುತ್ವದಲ್ಲಿ ಪಾಳೇಗಾರಿಕೆ ಜಾಸ್ತಿಯಾಗಿದೆ. ಅಂದು ರಾಜರಿಗೆ ಅಂತರಂಗದಲ್ಲಿ ಮಾತೃದನಿ ಇತ್ತು. ಇಂದು ಹೊಂದಾಣಿಕೆಯಿಲ್ಲದ ರಾಜ್ಯಬಾರ. ಮಾತನಾಡಿದರೇ ತೋಳೆತ್ತುತ್ತಾರೆ.
ರೈತರ ಸರಣಿ ಆತ್ಮಹತ್ಯೆ, ಹೆಣ್ಣಿನ ಮೇಲಿನ ಅತ್ಯಾಚಾರ ಯಾವುದೇ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳಲಾಗುತ್ತಿಲ್ಲ. ಲೋಕ ಜ್ಞಾನವಿಲ್ಲದವರು ಪಟ್ಟ ಹಿಡಿದು ಕುಳಿತಿದ್ದಾರೆ. ಅವರು ಯಾವುದೇ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ವೈದೇಹಿ ಚಾಟಿ ಬೀಸಿದರು.
ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ ಮುಂದಿನ ದಿನಗಳಲ್ಲಿ ಮ.ರಾಮಮೂರ್ತಿ, ಕೆಂಗಲ್ ಹನುಮಂತಯ್ಯ ಹೆಸರಿನಲ್ಲೂ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದ ಅವರು, ದಕ್ಷಿಣ ಕರ್ನಾಟಕವನ್ನು ಸಮೃದ್ಧಗೊಳಿಸಿದ ನಾಲ್ವಡಿ ಕೃಷ್ಣರಾಜರು ಸಾಮಾಜಿಕ ಕ್ರಾಂತಿಯರೂವಾರಿಗಳಾಗಿ ಶೋಷಿತರಿಗೆ ಪ್ರೇರಕ ಶಕ್ತಿಯಾಗಿದ್ದರು.
ವಿಧವೆಯರಿಗೆ ಮರುವಿವಾಹದ ಪರಿಕಲ್ಪನೆ ತಂದವರು. ದೇವದಾಸಿ ಪದ್ಧತಿ, ಗೆಜ್ಜೆಪೂಜೆಯಂತಪ ಅನಿಷ್ಠ ಪದ್ಧತಿಗಳಿಗೆ ತಿಲಾಂಜಲಿ ಇಟ್ಟವರು ಎಂದು ನಾಲ್ವಡಿ ಕೃಷ್ಣರಾಜರ ಆಳ್ವಿಕೆಯನ್ನು ಸ್ಮರಿಸಿದರು.
Advertisement