ಸುರಂಗ ತೋಡಿ ಆಭರಣದ ಅಂಗಡಿ ದರೋಡೆಗೆ ಯತ್ನಿಸುತ್ತಿದ್ದ ಮೂವರ ಬಂಧನ
ಬೆಂಗಳೂರು: ಮಧ್ಯರಾತ್ರಿಯಲ್ಲಿ ಚರಂಡಿ ಮೂಲಕ ಸುರಂಗ ತೋಡಿ ಆಭರಣದ ಅಂಗಡಿ ದರೋಡೆಗೆ ಯತ್ನಿಸುತ್ತಿದ್ದ ಮೂವರು ಖದೀಮರನ್ನು ಸಾರ್ವಜನಿಕರ ಸಹಾಯದೊಂದೆ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಚರಂಡಿ ಮೂಲಕ ಸುರಂಗ ತೋಡಿ, ಜೆ.ಪಿ.ನಗರದ ಸಾರಕ್ಕಿಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್ ಅಂಗಡಿಗೆ ನುಗ್ಗಲು ಯತ್ನಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಬೀರ್, ಮಹಮದ್ ಹಾಗೂ ಹುಸೇನ್ನನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಸುರಂಗ ಕೊರೆಯಲು ನೆರವು ಮಾಡುತ್ತಿದ್ದ ಮತ್ತೊಬ್ಬ ಆರೋಪಿ ಇಸ್ಮಾಯಿಲ್ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಡಿಸಿಪಿ ಲೋಕೇಶ್ಕುಮಾರ್ ಅವರು ತಿಳಿಸಿದ್ದಾರೆ.
ಪ್ರಿಯದರ್ಶಿನಿ ಜ್ಯುವೆಲರ್ಸ್ ಅಂಗಡಿಗೆ 10 ಅಡಿಗಳ ದೂರದಲ್ಲಿ ಒಳಚರಂಡಿ ಇದ್ದು, ಚಿನ್ನಾಭರಣ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದ ದುಷ್ಕರ್ಮಿಗಳು, ಇದನ್ನು ನೋಡಿಕೊಂಡು ಹೋಗಿದ್ದರು. ಬಳಿಕ ಆಭರಣ ದರೋಡೆಗೆ ಸಂಚು ರೂಪಿಸಿದ್ದರು.