
ಬೆಂಗಳೂರು: ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಅಂಕಿತ ಹಾಕದಂತೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಪ್ರತ್ಯೇಕ ನಿಯೋಗದಲ್ಲಿ ತೆರಳಿ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ರಾಜ್ಯಪಾಲರನ್ನು ಭೇಟಿಯಾದರು. ಚುನಾವಣೆ ಮುಂದೂಡಿಕೆ ವಿಚಾರದಲ್ಲಿ ಸರ್ಕಾರ ಹಲವು ಬಾರಿ ಹೈಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡ ನಂತರವೂ ಪಾಠ ಕಲಿತಿಲ್ಲ.
ಬೆಂಗಳೂರು ಮಹಾನಗರ ವಿಭಜಿಸಲು ಕಾಂಗ್ರೆಸ್ ಸರ್ಕಾರ ವಿಧೇಯಕ ತಂದಿದೆ. ಚುನಾವಣೆ ಮುಂದೂಡಿಕೆಗಾಗಿ ಈ ವಿಧೇಯಕ ಬಳಸಿಕೊಳ್ಳುತ್ತಿದೆ. ವಿಧಾನಪರಿಷತ್ತಿನಲ್ಲಿ ವಿಧೇಯಕ ತಿರಸ್ಕರಿಸಲ್ಪಟ್ಟಿದೆ. ವಿಧಾನಸಭೆಯಲ್ಲಿ ಹೆಚ್ಚು ಸದಸ್ಯರ ಬೆಂಬಲ ಹೊಂದಿರುವುದನ್ನೇ ದುರ್ಬಳಕೆ ಮಾಡಿಕೊಂಡು ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ನಗರದ ಆಡಳಿತ ಉತ್ತಮಗೊಳಿಸುವುದು ಸರ್ಕಾರದ ಉದ್ದೇಶವಾಗಿರದೆ, ಕೇವಲ ಚುನಾವಣೆ ಮುಂದೂಡುವ ತಂತ್ರ ಹೂಡಲಾಗಿದೆ. ವಿಧೇಯಕವು ತಜ್ಞರಿಂದ ತಯಾರಾದ ವರದಿ ಆಧರಿಸಿಲ್ಲ ಹಾಗೂ ವೈಜ್ಞಾನಿಕವಾಗಿ ನಗರ ವಿಂಗಡಿಸುವ ಉದ್ದೇಶವನ್ನೂ ಹೊಂದಿಲ್ಲ. ಹೀಗಾಗಿ ವಿಧೇಯಕ ತಿರಸ್ಕರಿಸಿ ನಗರದ ಆಡಳಿತ ಉಳಿಸಬೇಕು ಎಂದು ಬಿಜೆಪಿ ಸದಸ್ಯರು ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನು ಜೆಡಿಎಸ್ ಸದಸ್ಯರು ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ತೆರಳಿ, ರಾಜ್ಯ ಸರ್ಕಾರ ಸೂಕ್ತ ಕಾರಣವಿಲ್ಲದೆ ಬಿಬಿಎಂಪಿ ಚುನಾವಣೆ ಮುಂದೂಡುತ್ತಿದೆ. ಈ ಹಿಂದೆ ವಿಸರ್ಜನೆ ಎಂಬ ನೆಪದ ಮೂಲಕ ಚುನಾವಣೆ ಮುಂದೂಡಲಾಗಿತ್ತು. ನಂತರ ವಿಭಜನೆಗಾಗಿ ತಜ್ಞರ ಸಮಿತಿ ರಚಿಸಿ, ಚುನಾವಣೆ ಮುಂದೂಡುವ ಪ್ರಯತ್ನ ನಡೆಯಿತು. ಈಗ ಸಮಿತಿ ವರದಿಸಲ್ಲಿ ಸಿದ್ದು, ವಿಭಜನೆಗಾಗಿ ಕಾಲಾವಕಾಶ ಕೇಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಸದನದಲ್ಲಿ ಸದಸ್ಯರ ಮಾತಿಗೆ ಬೆಲೆ ನೀಡದೆ ವಿಭಜನೆಯ ಮಸೂದೆ ಅಂಗೀಕೃತವಾಗಿದ್ದು, ರಾಜ್ಯಪಾಲರ ಸಹಿಗಾಗಿ ಕಳುಹಿಸಲಾಗಿದೆ. ಚುನಾವಣಾ ಆಯೋಗ ಕೂಡ ಚುನಾವಣಾ ಅಧಿಸೂಚನೆ ಹಿಂಪಡೆದು ಮತ್ತೆ ಹೊಸ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಪ್ರತಿ ಬಾರಿ ಬಿಬಿಎಂಪಿ ಚುನಾವಣೆ ಮುಂದೂಡುತ್ತಿರುವುದನ್ನು ತಡೆಯಲು ವಿಧೇಯಕಕ್ಕೆ ಅಂಕಿತ ಹಾಕ ಬಾರದು ಎಂದು ಮನವಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾರಣವಿಲ್ಲದೆ ಚುನಾವಣೆ ಮುಂದೂಡುವುದು ಹಾಗೂ ದೀರ್ಘಕಾಲ ಚುನಾವಣೆ ನಡೆಯದಿರುವುದು, ಆ ಸಂಸ್ಥೆಗಳ ದಿವಾಳಿತನಕ್ಕೆ ಕಾರಣವಾಗಲಿದೆ.
ಸರ್ಕಾರ ಬಿಬಿಎಂಪಿ ಚುನಾವಣೆ ಮತ್ತೆ ಮತ್ತೆ ಮುಂದೂಡುತ್ತಿದ್ದು, ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೈಕೋರ್ಟ್ ಹಲವು ಪ್ರಕರಣಗಳಲ್ಲಿ ಚುನಾವಣೆ ಮುಂದೂಡ ಬಾರದು ಎಂದು ಸೂಚಿಸಿದ್ದರೂ, ಸರ್ಕಾರ ಮಾತು ಕೇಳುತ್ತಿಲ್ಲ. ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ವಿಧೇಯಕ ಮಂಡಿಸಿರುವ ಸರ್ಕಾರ, ಸದನದಲ್ಲಿ ಅನುಮತಿ ಪಡೆಯಲು ಯಶಸ್ವಿಯಾಗಿದೆ. ಈಗ ರಾಜ್ಯಪಾಲರು ಇದಕ್ಕೆ ಸಹಿ ಹಾಕಿದರೆ ಮತ್ತೆ ಚುನಾವಣೆ ಮುಂದೆ ಹೋಗಲಿದೆ. ಹೀಗಾಗಿ ವಿಧೇಯಕಕ್ಕೆ ಸಹಿ ಹಾಕಬಾರದು ಎಂದು ಉಭಯ ಪಕ್ಷಗಳ ನಾಯಕರು ಮನವಿ ಮಾಡಿದ್ದಾರೆ. ನಿಯೋಗದಲ್ಲಿ ವೈಎಸ್ವಿ ದತ್ತ, ಬಸವರಾಜ ಹೊರಟ್ಟಿ, ಟಿ.ಎ.ಶರವಣ, ಬಿಜೆಪಿಯ ಎಸ್.ಆರ್.ವಿಶ್ವನಾಥ್, ವಿಜಯ ಕುಮಾರ್, ವಿ.ಸೋಮಣ್ಣ, ಅಶ್ವತ್ಥನಾರಾ ಯಣ ಸೇರಿದಂತೆ ಪಕ್ಷಗಳ ವಿವಿಧ ಶಾಸಕರು ಹಾಜರಿದ್ದರು.
Advertisement