ಕ್ಲಬ್ ವಿರುದ್ಧ ದಬ್ಬಾಳಿಕೆ ಕ್ರಮ ಜರುಗಿಸಲ್ಲ: ರಾಜ್ಯ ಸರ್ಕಾರ

ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಬೆಂಗಳೂರು ಕ್ಲಬ್‍ಗೆ ಸೇರಿದ ಎಂಟು ಎಕರೆ ಪ್ರದೇಶ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಹೊರಡಿಸಿದ ನೋಟಿಫಿಕೇಷನ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಮುಂದಿನ ವಿಚಾರಣೆವರೆಗೂ ಯಾವುದೇ ರೀತಿಯ ದಬ್ಬಾಳಿಕೆ ಕ್ರಮ ಜರುಗಿಸುವುದಿಲ್ಲ...
ಕರ್ನಾಟಕ ಹೈ ಕೋರ್ಟ್ (ಸಂಗ್ರಹ ಚಿತ್ರ)
ಕರ್ನಾಟಕ ಹೈ ಕೋರ್ಟ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಬೆಂಗಳೂರು ಕ್ಲಬ್‍ಗೆ ಸೇರಿದ ಎಂಟು ಎಕರೆ ಪ್ರದೇಶ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಹೊರಡಿಸಿದ ನೋಟಿಫಿಕೇಷನ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಮುಂದಿನ ವಿಚಾರಣೆವರೆಗೂ ಯಾವುದೇ ರೀತಿಯ ದಬ್ಬಾಳಿಕೆ ಕ್ರಮ ಜರುಗಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ತಿಳಿಸಿದೆ.

ಬೆಂಗಳೂರು ಕ್ಲಬ್‍ನ ಹಕ್ಕು ಕ್ರಯಪತ್ರ ಮತ್ತು ಮಾಲೀಕತ್ವ ತನಗೆ ಸೇರಿದೆ ಎಂದು ಹೇಳಿದ್ದ ಸರ್ಕಾರ, ಜೂ.26ರಂದು ಕಂದಾಯ ಇಲಾಖೆಯ ಸಹಾಯಕ ಆಯುಕ್ತರ ಮೂಲಕ ಕ್ಲಬ್‍ಗೆ ಅಧಿಕೃತ ನೋಟಿಸ್ ಜಾರಿ ಮಾಡಿತ್ತು. ನಂತರ ಜಾಗ ತೆರವುಗೊಳಿಸುವಂತೆ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಜು.20ರಂದು ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಬೆಂಗಳೂರು ಕ್ಲಬ್ ಮತ್ತು ಅದರ ಅಧ್ಯಕ್ಷ ಜಿ.ವಿ. ರಾಧಾಕೃಷ್ಣನ್ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಾದ ಮುಂದುವರಿಸಿದ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ಬೆಂಗಳೂರು ಕ್ಲಬ್ ನೋಂದಣಿಯಾಗದ ಕ್ಲಬ್ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಕ್ಲಬ್‍ಗೆ ಮಾನ್ಯತೆಯೇ ಇಲ್ಲ. ಅಲ್ಲದೇ ಸದ್ಯ ಅರ್ಜಿ ಕ್ಲಬ್ ಅಥವಾ ಸಂಸ್ಥೆ ಹೆಸರಲ್ಲಿ ದಾಖಲಾಗಿದೆಯೇ ಹೊರತು ಒಬ್ಬ ವ್ಯಕ್ತಿಯ ಹೆಸರಲ್ಲಿ ಅಲ್ಲ. ಆದ್ದರಿಂದ ಈ ಅರ್ಜಿ ರಿಟ್ ವ್ಯಾಪ್ತಿಗೆ ಆಗಮಿಸುವುದಿಲ್ಲ ಮತ್ತು ಈ ಅರ್ಜಿ ರಿಟ್ ಅರ್ಜಿಯಾಗಿ ವಿಚಾರಣೆ ನಡೆಸಲು
ಯೋಗ್ಯವಲ್ಲ. ಅರ್ಜಿದಾರರಿಗೆ ವಿಚಾರಣ ಹಕ್ಕು ಕೂಡ (ಲೋಕಸ್ ಸ್ಟಾಂಡಿ) ಇಲ್ಲವಾಗಿದೆ ಎಂದು ವಾದಿಸಿದರು.

ಈ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ ಮೂಲ ಅರ್ಜಿ, ತಿದ್ದುಪಡಿ ಅರ್ಜಿ ಎಲ್ಲವನ್ನೂ ಕೂಲಂಕಷವಾಗಿ  ಪರಿಶೀಲಿಸಿ, ತನ್ನ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ಏಕಸದಸ್ಯ ಪೀಠ ವಿಚಾರಣೆ ಮುಂದೂಡಿದೆ.

ಮದ್ಯ ಸರಬರಾಜಿಗೆ ಮಾರ್ಗ: ಬೆಂಗಳೂರು ಕ್ಲಬ್‍ಗೆ ತಾತ್ಕಾಲಿಕವಾಗಿ ಮದ್ಯ ಮಾರಾಟ ಮಾಡಲು ವಿಶೇಷ ಪರವಾನಗಿ ಸಿಎಲ್-6 ಅಡಿಯಲ್ಲಿ ಅವಕಾಶ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. `ಬೆಂಗಳೂರು ಕ್ಲಬ್'ಗೆ ಲಿಕ್ಕರ್ ಮಾರಾಟ ಮಾಡಲು ನೀಡಿದ್ದ ಅನುಮತಿ ಕೂಡ ರದ್ದುಗೊಳಿಸಿ ಅಬಕಾರಿ ಆಯುಕ್ತರು ಜು.1ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಕ್ಲಬ್ ಹೈ ಕೋರ್ಟ್ ನಲ್ಲಿ ಮತ್ತೊಂದು ತಕರಾರು ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಅವರಿದ್ದ ಏಕಸದಸ್ಯ ಪೀಠ, ಸಿಎಲ್-6ರ ಅಡಿ ಮೂರು ದಿನದ ಒಳಗಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ನೀಡಿ ಎಂದ ಪೀಠ, ಅರ್ಜಿದಾರರು ಸಲ್ಲಿಸುವ ಸಹಕಾರ ಸಂಘಗಳ ಕಾಯ್ದೆ ವ್ಯಾಪ್ತಿಯೊಳಗೆ ಆಗಮಿಸುವ ಕುರಿತು ನೋಂದಣಿ ಮಾಡಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿ ಎಂದು ಏಕಸದಸ್ಯ ಪೀಠ ಅರ್ಜಿದಾರರಿಗೆ ಮೌಖಿಕವಾಗಿ ಸಲಹೆ ನೀಡಿ ಆ.5ಕ್ಕೆ ವಿಚಾರಣೆ ಮುಂದೂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com