ಬೆಂಗಳೂರು: ನಗರದ ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾಗಿರುವ 8,811 ಟ್ರಾನ್ಸ್ ಫಾರ್ಮರ್ಗಳ ಪೈಕಿ ಕೇವಲ 1,084 ಟ್ರಾನ್ಸ್ ಫಾರ್ಮರ್ಗಳನ್ನು ಮಾತ್ರ ಸ್ಥಳಾಂತರಿಸಲು ಸಾಧ್ಯವಾಗುತ್ತದೆ ಎಂದು ಬೆಸ್ಕಾಂ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ನಗರದ ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂ ಟ್ರಾನ್ಸ್ ಫಾರ್ಮರ್ಗಳನ್ನು ಅಳವಡಿಸಿದ ಪರಿಣಾಮ ಪಾದಚಾರಿಗಳು ನಡೆದಾಡುವುದೇ ಕಷ್ಟವಾಗಿದೆ. ಮಾತ್ರವಲ್ಲದೇ ಮಳೆಗಾಲದಲ್ಲಿ
ಪಾದಚಾರಿ ಮಾರ್ಗದಲ್ಲಿ ನಡೆದಾಡಬೇಕಾದರೆ ಪಾದಚಾರಿಗಳು ತಮ್ಮ ಜೀವ ಕೈಯಲ್ಲಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.
ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು ವಾದ ಮಂಡಿಸಿ, ಕರ್ನಾಟಕ ವಿದ್ಯುಚ್ಛಕ್ತಿ ಕಾಯ್ದೆ ಅನ್ವಯ ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಆದರೆ ಪಾದಚಾರಿಗಳಿಗೆ ತೊಂದರೆ ನೀಡುವುದು ಬೆಸ್ಕಾಂನ ಉದ್ದೇಶವಲ್ಲ. ಸಾಧ್ಯವಾದಷ್ಟು ಟ್ರಾನ್ಸ್ ಫಾರ್ಮರ್ಗಳ ಅಳವಡಿಕೆ ಕಡಿತಗೊಳಿಸುವ ಕುರಿತು ಸಹ ಬೆಸ್ಕಾಂ ಚಿಂತಿಸುತ್ತಿದೆ ಎಂದು ವಿಚಾರಣೆ ವೇಳೆ ವಾದ ಮಂಡಿಸಿದರು. ಅಲ್ಲದೇ ಪಾದಚಾರಿ ಮಾರ್ಗಗಳಿಂದ ಬೇರೆಡೆ ಟ್ರಾನ್ಸ್ ಫಾರ್ಮರ್ಗಳನ್ನು ಸ್ಥಳಾಂತರ ಕೋರಿ ಬಿಬಿಎಂಪಿ ಹಾಗೂ ಕೆಇಆರ್ಸಿಗೆ ಅನುಮತಿ ನೀಡುವಂತೆ ಕೋರಿ ಪತ್ರಬರೆಯಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. ವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ. ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಾಲ್ಕು ವಾರಗಳ ಕಾಲ ಮುಂದೂಡಿದೆ.
Advertisement