ಸ್ವಚ್ಛತೆ ಕಡ್ಡಾಯಕ್ಕೆ ತಿದ್ದುಪಡಿ ವಿಧೇಯಕ: ಡಿವಿಎಸ್
ಬೆಂಗಳೂರು: ಸ್ವಚ್ಛತೆ ಎಲ್ಲರ ಕಡ್ಡಾಯ ಕೆಲಸವಾಗುವಂತೆ ಮಾಡಲು ಕೇಂದ್ರ ಸರ್ಕಾರ ಪ್ರತ್ಯೇಕ ತಿದ್ದುಪಡಿ ವಿಧೇಯಕ ರೂಪಿಸಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಒಳ್ಳೆ ಕಾರ್ಯಕ್ರಮಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಅಷ್ಟು ಸುಲಭವಾಗಿ ಪಾಲಿಸುವುದಿಲ್ಲ. ಸ್ವಲ್ಪ ಮಟ್ಟಿಗಾದರೂ ದಂಡ ಬಳಸಿದರೆ ಮಾತ್ರ ಪಾಲನೆ ಮಾಡುತ್ತಾರೆ. ಹೀಗಾಗಿ ಸ್ವಚ್ಛತೆ ಕಾರ್ಯವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಪರಿಸರ ಇಲಾಖೆ ತಿದ್ದುಪಡಿ ವಿಧೇಯಕ ರೂಪಿಸಿದೆ ಎಂದರು.
ಸಾರ್ವಜನಿಕ ಸ್ಥಳಗಳನ್ನು ಮಲಿನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆಂದು ಇಲಾಖೆ ಈಗಾಗಲೇ ಕರಡು ತಿದ್ದುಪಡಿ ವಿಧೇಯಕನ್ನು ಸಿದ್ಧಪಡಿಸಿದ್ದು, ಇದನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದರು.
ಪರಿಸರ ರತ್ನಗಳಿಗೆ ಪುರಸ್ಕಾರ: ರಾಜ್ಯ ಸರ್ಕಾರ ಕೊಡ ಮಾಡುವ ಪ್ರಸಕ್ತ ಸಾಲಿನ ಪರಿಸರ ಪ್ರಶಸ್ತಿಯನ್ನು ಮೂವರು ಸಾಧಕರು ಹಾಗೂ ಮೂರು ಸಾಧಕ ಸಂಸ್ಥೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಬೆಂಗಳೂರಿನ ಸಿ.ಲಕ್ಷ್ಮಣ್, ಧಾರವಾಡದ ಡಾ.ಆರ್.ಪರಿಮಳ, ಮಂಗಳೂರಿನ ಡಾ.ಎಸ್.ಹರೀಶ್ ಜೋಶಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆಯೇ ಪರಿಸರ ರಕ್ಷಣೆಯಲ್ಲಿ ಕೊಡುಗೆ ನೀಡಿದ ಬೆಂಗಳೂರಿನ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್, ಬಾಗಲಕೋಟೆಯ ಬಂಟನೂರ ಗ್ರಾಮ ಅರಣ್ಯ ಸಮಿತಿ, ದಾಂಡೇಲಿಯ ಇಕೋ ಡೆವಲಪ್ ಮೆಂಟ್ ಕಮಿಟಿಗೆ ಈ ಸಾಲಿನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಪ್ರದಾನ ಮಾಡಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ